More

    ರಾಷ್ಟ್ರದ ಪಾರಂಪರಿಕ ಜ್ಞಾನವನ್ನು ಮಾತೃಭಾಷೆಗಳಲ್ಲಿ ಕಲಿತರೆ ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು – ನಾಡೋಜ ಡಾ.ಚಂದ್ರಶೇಖರ ಕಂಬಾರ ಅಭಿಮತ

    ಹೊಸಪೇಟೆ: ವಿದ್ಯೆ ಎಂದರೆ ಕೇವಲ ಆಂಗ್ಲಭಾಷೆಯಲ್ಲ. ರಾಷ್ಟ್ರದ ಪಾರಂಪರಿಕ ಜ್ಞಾನವನ್ನು ಮಾತೃಭಾಷೆಗಳಲ್ಲಿ ಕಲಿತರೆ ಅದನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು ಎಂದು ನಾಡೋಜ ಡಾ.ಚಂದ್ರಶೇಖರ ಕಂಬಾರ ಹೇಳಿದರು.

    ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯುಎಸಿ) ಹಾಗೂ ಆಂಧ್ರದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಭಾಷೆ ಮತ್ತು ಸಮುದಾಯ ಕೇಂದ್ರಿತ ವಿಶ್ವವಿದ್ಯಾಲಯಗಳ ಅಸ್ಮಿತೆಯ ಪ್ರಶ್ನೆಗಳು(ಎನ್‌ಇಪಿ-2020 ಅನುಲಕ್ಷಿಸಿ) ಎನ್ನುವ ಒಂದು ದಿನದ ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಮಾತನಾಡಿದರು.ಬ್ರಿಟೀಷರು ಆಂಗ್ಲ ಶಿಕ್ಷಣವನ್ನು ನೀಡುವುದರ ಜತೆಗೆ ಎರಡು ಕಲ್ಪನೆಗಳನ್ನು ಕೊಟ್ಟರು. ಇತಿಹಾಸ ಮತ್ತು ಕೀಳರಿಮೆ ಸೃಷ್ಟಿ ಮಾಡಿದರು. ವಿದ್ಯೆಯನ್ನು ಕಲಿಯಬೇಕು ಎಂದರೆ ಅದು ಆಂಗ್ಲ ಭಾಷೆಯಲ್ಲಿ ಮಾತ್ರ ಎನ್ನುವ ಮಟ್ಟದಲ್ಲಿ ಆಂಗ್ಲಭಾಷೆಯ ಒತ್ತಡವನ್ನು ಹೇರಿದರು. ಇದು ದುರಾದೃಷ್ಟಕರ ಸಂಗತಿಯಾಗಿದೆ. ಇಂದು ನಾವೆಲ್ಲರೂ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇಂಗ್ಲಿಷ್ ಇಲ್ಲದೆ ನಮ್ಮ ಜೀವನ ಇಲ್ಲದಂತಾಗಿದೆ ಎನ್ನುವ ಮಟ್ಟಕ್ಕೆ ಬೆಳೆದುನಿಂತಿದ್ದು ಇದು ಆಗಬಾರದು.

    ಭಾರತದಲ್ಲ್ಲಿ 35ಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಿದ್ದು ನಮ್ಮ ದೇಶದಲ್ಲಿರುವ ದೇಶಿಯ ಜ್ಞಾನ ಸಂಪತ್ತನ್ನು ಪ್ರಾದೇಶಿಕ ಮಾತೃ ಭಾಷೆಗಳಲ್ಲಿ ಶಾಸ್ತ್ರೀಯವಾಗಿ ಬಹುಶಿಸ್ತೀಯ ನೆಲೆಯಲ್ಲಿ ಅವುಗಳನ್ನು ಅಧ್ಯಯನ ಮಾಡಿದರೆ ಕನ್ನಡದ ವಿದ್ವತ್ ವಿಸ್ತಾರವಾಗುತ್ತದೆ. ಹೆಚ್ಚೆಚ್ಚು ಕನ್ನಡದ ಶಕ್ತಿ ಬೆಳೆಯುತ್ತದೆ. ಶಿವರಾಮ ಕಾರಂತರು ಅನ್ಯ ಭಾಷೆಗಳ ಜ್ಞಾನ ಸಂಪತ್ತನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕನ್ನಡದ ಶಕ್ತಿ ಹೆಚ್ಚಾಗಿದೆ. ಪ್ರಮುಖವಾಗಿ ಕುವೆಂಪು ಅವರು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹಾಗೂ ಇತರ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ನೀಡಬೇಕೆಂದು ತಿಳಿಸಿದರು. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯವು ಪಿಯುಸಿ ಪಠ್ಯಪುಸ್ತಕಗಳನ್ನು ಕನ್ನಡ ಭಾಷೆಯಲ್ಲಿ ಸಿದ್ಧಪಡಿಸಿ ಪ್ರಕಟಿಸಿದೆ. ಇವುಗಳಿಂದ ಅವುಗಳಲ್ಲಿರುವ ಜ್ಞಾನದ ವಸ್ತುವಿಷಯವು ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ಅರ್ಥವಾಗಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ವಿ.ಕಟ್ಟೀಮನಿ ಮಾತನಾಡಿ, ದೇಶದ ಆಯುರ್ವೇದ, ಯೋಗ, ನಾಟಿ ಔಷಧ, ಬುಡಕಟ್ಟುಗಳ ವೈದ್ಯ ಪದ್ಧತಿ, ಬೌದ್ಧ ಹಾಗೂ ಜೈನ ಧರ್ಮಗಳ ಜ್ಞಾನ ಪರಂಪರೆಯಲ್ಲಿ ನಮ್ಮ ಹಿರಿಯರು ಯಾವತ್ತೂ ವ್ಯಾಪಾರೀಕರಣ ಮಾಡಿಲ್ಲ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲಘಟ್ಟದಲ್ಲಿ ನಾವು ಬದಲಾಗಬೇಕು. ಕನ್ನಡ ಭಾಷೆಯ ಜ್ಞಾನಶಾಖೆ ವಿಸ್ತಾರವಾಗಬೇಕಾದರೆ ಅನ್ಯ ಭಾಷೆಗಳನ್ನು ನಾವು ಅಳವಡಿಸಿಕೊಳ್ಳಬೇಕು. ಆದರೆ ಕನ್ನಡ ಭಾಷೆಯ ಜ್ಞಾನ ಸಂಪತ್ತು ಶ್ರೀಮಂತಗೊಳ್ಳುವುದರ ಜತೆಗೆ ಶಕ್ತಿಯುತವಾಗಿ ಅಭಿವೃದ್ಧಿಗೊಳ್ಳುತ್ತದೆ ಎಂದರು.

    ಕುಲಪತಿ ಡಾ.ಸ.ಚಿ.ರಮೇಶ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಎ.ಸುಬ್ಬಣ್ಣ ರೈ, ಭಾಷಾ ನಿಕಾಯದ ಡೀನ್ ಸಂಚಾಲಕ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಐಕ್ಯುಎಸಿ ನಿರ್ದೇಶಕ ಡಾ.ಎ.ಮೋಹನ್ ಕುಂಟಾರ್ ನಿರೂಪಿಸಿದರು. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ.ವಿ.ಮುರಳೀಧರ ಶರ್ಮ, ಕರ್ನಾಟಕ ಜಾನಪದ ವಿವಿ ಕುಲಪತಿ ಡಾ.ಡಿ.ಬಿ.ನಾಯಕ್, ಅಕ್ಕ ಮಹಾದೇವಿ ಮಹಿಳಾ ವಿವಿ ಕುಲಪತಿ ಡಾ.ಬಿ.ಕೆ.ತುಳಸಿಮಾಲಾ, ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಕುಲಪತಿ ಡಾ.ನಾಗೇಶ ಬೆಟ್ಟಕೋಟೆ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts