ನವದೆಹಲಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಡಲು ಟೀಮ್ ಇಂಡಿಯಾ ಆಲ್ರೌಂಡರ್ ಆಟಗಾರ ರವೀಂದ್ರ ಜಡೇಜಾಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಅನುಮತಿ ನಿರಾಕರಿದ್ದಾರೆ.
ಮಾರ್ಚ್ 9ರಿಂದ ಆರಂಭವಾಗುವ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಪರವಾಗಿ ಆಡಲು ಅನುಮತಿ ಕೋರಲಾಗಿತ್ತು. ಆದರೆ, ಮಾರ್ಚ್ 12ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಿರುವ ಗಂಗೂಲಿ, ದೇಶವೇ ಮೊದಲಾಗಿದ್ದು, ನಿಯಮಗಳನ್ನು ಪಾಲಿಸಲೇ ಬೇಕು ಎಂದು ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಜೈದೇವ್ ಷಾ ಅವರಿಗೆ ಹೇಳಿದ್ದಾರೆ.
ನಾನು ಗಂಗೂಲಿ ಅವರೊಂದಿಗೆ ಮಾತನಾಡಿದೆ. ಜಡೇಜಾ ಅವರು ರಣಜಿ ಆಡಲು ಬೋರ್ಡ್ ಅನುಮತಿ ನೀಡುವುದಿಲ್ಲ ಎಂದಿದೆ. ಮೊದಲು ದೇಶ, ಆಮೇಲೆ ಉಳಿದದ್ದು ಎಂದು ಗಂಗೂಲಿ ತಿಳಿಸಿದ್ದಾಗಿ ಷಾ ಹೇಳಿದರು.
ಮಹತ್ವದ ದೇಶಿ ಪಂದ್ಯಾವಳಿ ಸಮಯದಲ್ಲೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಬಾರದು ಎಂದು ಸಲಹೆ ನೀಡಿದ ಷಾ, ಹಣ ಹರಿದಾಡುವ ಐಪಿಎಲ್ ಸಮಯದಲ್ಲೇಕೆ ರಾಷ್ಟ್ರೀಯ ಪಂದ್ಯಗಳು ನಡೆಯುವುದಿಲ್ಲ ಎಂದು ಪ್ರಶ್ನಿಸಿದರು. ಕೊನೆ ಬಾರಿಗೆ ಫೈನಲ್ ಪಂದ್ಯದಲ್ಲಾದರೂ ಸ್ಟಾರ್ ಆಟಗಾರರು ಆಡಿದರೆ ದೇಶಿ ಪಂದ್ಯಾವಳಿಗಳು ಪ್ರಸಿದ್ಧಿ ಪಡೆದುಕೊಳ್ಳುತ್ತವೆ ಎಂದರು.
ಜಡೇಜಾ ಅವರು ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಡುವುದನ್ನು ನೋಡಲು ನಮಗೆ ತುಂಬಾ ಇಷ್ಟವಿದೆ. ಜಡೇಜಾ ಮಾತ್ರವಲ್ಲ ಪಶ್ಚಿಮ ಬಂಗಾಳ ಪರ ಮಹಮ್ಮದ್ ಶಮಿ ಆಡುವುದನ್ನು ನೋಡಲು ಇಚ್ಛಿಸುತ್ತೇನೆ ಎಂದರು.
ಅಂದಹಾಗೆ ಮಾರ್ಚ್ 9 ರಿಂದ ಆರಂಭವಾಗುವ ಫೈನಲ್ ಪಂದ್ಯದಲ್ಲಿ ರಣಜಿ ಟ್ರೋಫಿಗಾಗಿ ಪಶ್ಚಿಮ ಬಂಗಾಳ ಮತ್ತು ಸೌರಾಷ್ಟ್ರ ತಂಡ ಸೆಣಸಾಡಲಿವೆ. (ಏಜೆನ್ಸೀಸ್)