ಹುಬ್ಬಳ್ಳಿ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಲ್ಲಿರುವ ವಿಶ್ವಗಂಗಾ ಹತ್ತಿ ಜಿನ್ನಿಂಗ್ ಕಾರ್ಖಾನೆಯಲ್ಲಿ ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಲು ಅನುಮತಿ ನೀಡುವಂತೆ ಆಗ್ರಹಿಸಿ ನಗರದ ನ್ಯೂ ಕಾಟನ್ ಮಾರ್ಕೆಟ್ನಲ್ಲಿರುವ ಕಾಟನ್ ಕಾಪೋರೇಷನ್ ಆಫ್ ಇಂಡಿಯಾ ಲಿ. ಕಚೇರಿ ಎದುರು ಹುಬ್ಬಳ್ಳಿ, ರಾಯಚೂರು ಹಾಗೂ ಯಾದಗಿರಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು.
ವಡಗೇರಾ ತಾಲೂಕಿನ ಹೈಯ್ಯಾಳ, ಹಣಕಸುಗೂರು, ಕೊಂಕಲ್, ಹಾಲಗೇರಾ, ಶಿವಪುರ, ಜೋಳದಡಗಿ, ಬೆಂಡೆಬೆಂಬಳ, ಮಾಚನೂರು, ಕಂದಳ್ಳಿ, ಬಿರಾರ, ಕದ್ರಾಪುರ, ರೋಟನ್ ಅಡಗಿ, ದೇವದುರ್ಗ ತಾಲೂಕಿನ ಕೊಟ್ಟೂರು, ರಾಯಕುಂಪಿ, ಯಾಟಗಲ್, ಮದರಕಲ್ಲು, ಗಬ್ಬೂರ, ಚಿಕ್ಕ ಬೂದುರ, ಅರಷಣಗಿ, ಶಾವಂತಗೇರ, ಖಾನಾಪುರ ಹಾಗೂ ಇತರ ಗ್ರಾಮಗಳ ರೈತರಿಗೆ ಹತ್ತಿ ಖರೀದಿ ಕೇಂದ್ರ ಪ್ರಾರಂಭದಿಂದ ಅನುಕೂಲವಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೋವಿಡ್ನಿಂದಾಗಿ ರೈತರು ದೂರದ ನಗರಗಳಿಗೆ ಹತ್ತಿ ತೆಗೆದುಕೊಂಡು ಹೋಗಿ ಮಾರಾಟ ಮಾಡುವುದು ಕಷ್ಟವಾಗಿದೆ. ಹೀಗಾಗಿ ಗೂಗಲ್ ಗ್ರಾಮದ ಜಿನ್ನಿಂಗ್ನಲ್ಲಿಯೇ ಹತ್ತಿ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿ, ಮನವಿಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ನಿಂಗಣ್ಣ ಜೆಡಿ, ಮಲ್ಲಣ್ಣ ನೀಲಹಳ್ಳಿ, ಸಿದ್ದು ತೇಜಿ ಇತರರಿದ್ದರು.