ನವದೆಹಲಿ: ಮೇ 4ಕ್ಕೆ ಎರಡನೇ ಹಂತದ ಲಾಕ್ಡೌನ್ ಅವಧಿ ಮುಕ್ತಾಯಗೊಂಡು, ಈಗ ಕೆಲವು ಸಡಿಲಿಕೆಗಳೊಂದಿಗೆ ಮೇ 17ರವರೆಗೆ ದೇಶಾದ್ಯಂತ ಲಾಕ್ಡೌನ್ ಮುಂದುವರಿಯುತ್ತಿದೆ.
ಮೇ 17ರ ನಂತರ ಲಾಕ್ಡೌನ್ ಮುಂದುವರಿಸಬೇಕೋ, ಬೇಡವೋ, ಒಮ್ಮೆ ಮುಂದುವರಿಸಿದರೂ ಅದರ ಸ್ವರೂಪ ಹೇಗಿರುತ್ತದೆ ಎಂಬುದನ್ನು ಆಯಾ ರಾಜ್ಯಗಳಲ್ಲಿನ ಕರೊನಾ ಪರಿಸ್ಥಿತಿ ನೋಡಿಕೊಂಡು ಕೇಂದ್ರ ಸರ್ಕಾರ ನಿರ್ಧಾರ ಮಾಡಲಿದೆ.
ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ನಡೆಯುತ್ತಿದ್ದು ಅದರ ಅವಧಿ ಮೇ 17ಕ್ಕೆ ಮುಕ್ತಾಯಗೊಳ್ಳಲಿದೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು, ತಮ್ಮ ರಾಜ್ಯದಲ್ಲಿ ಲಾಕ್ಡೌನ್ನ್ನು ಮೇ 29ರವರೆಗೆ ಮುಂದುವರಿಸುವುದಾಗಿ ಈಗಲೇ ಘೋಷಿಸಿಬಿಟ್ಟಿದ್ದಾರೆ.
ಮಂಗಳವಾರ ಸಂಜೆ ಸುಮಾರು 7 ತಾಸು ಕ್ಯಾಬಿನೇಟ್ ಮೀಟಿಂಗ್ ನಡೆಸಿದ ಅವರು ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಗೆ COVID19 ವಕ್ಕರಿಸಿದ್ಹೇಗೆ?
ನಮ್ಮ ರಾಜ್ಯದಲ್ಲಿ ಸುಮಾರು 6 ಜಿಲ್ಲೆಗಳು ಕರೊನಾ ರೆಡ್ಝೋನ್ನಲ್ಲಿ ಇವೆ. 18 ಆರೆಂಜ್ ಝೋನ್ಗಳು ಇವೆ ಮತ್ತು 9 ಹಸಿರು ವಲಯಗಳಿವೆ. ಅದರಲ್ಲೂ ಮೂರು ಜಿಲ್ಲೆಗಳಲ್ಲಿ ವಿಪರೀತ ಕೊರನಾ ಸೋಂಕಿತರು ಇದ್ದಾರೆ.
ಕೆಲವು ನಿರ್ಬಂಧ, ಷರತ್ತುಗಳೊಂದಿಗೆ ರೆಡ್ ಝೋನ್ನಲ್ಲೂ ಅಂಗಡಿಗಳನ್ನು ತೆರೆಯಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ನಾವು ಹೈದರಾಬಾದ್, ಮೆಡ್ಚಲ್, ಸೂರ್ಯಪೆಟ್, ವಿಕಾರಾಬಾದ್ಗಳಲ್ಲಿ ಯಾವುದೇ ಅಂಗಡಿಗಳನ್ನೂ ಓಪನ್ ಮಾಡಲು ಬಿಟ್ಟಿಲ್ಲ.
ಇದನ್ನೂ ಓದಿ: ಹಾದಿ ತಪ್ಪಿದ್ರೆ ಕಿಕ್ಔಟ್, ರಾಜ್ಯದ ಸರ್ಕಾರಿ ನೌಕರರಿಗೆ ಸಿದ್ಧವಾಗುತ್ತಿದೆ ಮೂಗುದಾರ
ನಮ್ಮ ರಾಜ್ಯದಲ್ಲಿ ಜನರು ಲಾಕ್ಡೌನ್ ವಿಸ್ತರಣೆಯಾಗಬೇಕು ಎನ್ನುತ್ತಿದ್ದಾರೆ. ಹಾಗಾಗಿ ಮೇ 29ರವರೆಗೂ ಕಟ್ಟುನಿಟ್ಟಾಗಿ ಮುಂದುವರಿಸುತ್ತೇವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಮಾಹಿತಿ ರವಾನಿಸಿದ್ದೇನೆ ಎಂದು ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಒಟ್ಟು 1096 ಕೊರನಾ ಪ್ರಕರಣಗಳು ಇದ್ದು, ಅದರಲ್ಲಿ 439 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 628 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ: ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?