ಬಾಗಲಕೋಟೆ: ಲಾಕ್ಡೌನ್ ಇದ್ದುದರಿಂದ ಮಗುವಿನ ನಾಮಕರಣವನ್ನು ವಿಡಿಯೋ ಕಾಲ್ ಮೂಲಕ ನಡೆಸಿದ ಘಟನೆ ನಡೆದಿದೆ.
ಅದ್ದೂರಿಯಾಗಿ ಸಮಾರಂಭ ಹಮ್ಮಿಕೊಳ್ಳದೆ, ಅತಿಥಿಗಳೆಲ್ಲ ಒಂದೇ ಮನೆಯಲ್ಲಿ ಗುಂಪು ಸೇರದೆ ವಿಡಿಯೋ ಕಾಲ್ ಮೂಲಕವೇ ಮೂರು ಜಿಲ್ಲೆಗಳಲ್ಲಿರುವ ಕುಟುಂಬಸ್ಥರು ನಾಮಕರಣದಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ಸಾಗರ ಹಂಜಿ ಅವರ ಪುತ್ರಿಯ ನಾಮಕರಣ ಕಾರ್ಯಕ್ರಮ ಇದಾಗಿತ್ತು. ಸಮಾರಂಭ ನಡೆದಿದ್ದು ಸಾಗರ್ ಪತ್ನಿ ಸಂಗೀತಾ ಅವರ ತವರುಮನೆ ಶಹಾಪುರ ಪಟ್ಟಣದಲ್ಲಿ. ನಾಮಕರಣ ಮಾಡಬೇಕಾಗಿದ್ದ ಮಗುವಿನ ಸೋದರತ್ತೆ ಬೆಳಗಾವಿ ಜಿಲ್ಲೆಯವರು.
ಲಾಕ್ಡೌನ್ ಇರುವುದರಿಂದ ಒಂದು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣ ಸಾಧ್ಯವೇ ಇಲ್ಲ. ಆದರೆ ಈ ಮೂರು ಕುಟುಂಬದವರು ಸೇರಿ ವಿಡಿಯೋ ಕಾಲ್ ಮೂಲಕವೇ ಶಾಸ್ತ್ರೋಕ್ತವಾಗಿ ಮಗುವಿಗೆ ಬನಶಂಕರಿ ಎಂದು ಹೆಸರಿಟ್ಟರು. ನಾಮಕರಣದ ಹಾಡನ್ನೂ ಹಾಡಿದರು.
ಬಾಗಲಕೋಟೆ, ಬೆಳಗಾವಿ ಮತ್ತು ಕಲಬುರಗಿ ಮೂರು ಜಿಲ್ಲೆಗಳೂ ಕರೊನಾ ವೈರಸ್ ಹಾಟ್ಸ್ಫಾಟ್ಗಳಾಗಿವೆ. ಅಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.