ಬೆಂಗಳೂರು: ಕೊವಿಡ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಜೈನ್ ಆಸ್ಪತ್ರೆಯಲ್ಲಿ ಪರಿಚಯಿಸಿರುವ ವರ್ಚುಯಲ್ ಕ್ಲಿನಿಕ್ ವ್ಯವಸ್ಥೆಯನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಬುಧವಾರ ಪರಿಶೀಲಿಸಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ತಜ್ಞ ವೈದ್ಯರು ರೋಗಿಗಳನ್ನು ಪರೀಕ್ಷಿಸುವ ಮತ್ತು ಸೂಕ್ತ ಚಿಕಿತ್ಸೆಗೆ ಶಿಫಾರಸು ಮಾಡುವ ವರ್ಚುಯಲ್ ಕ್ಲಿನಿಕ್ ವ್ಯವಸ್ಥೆ ಈ ಸಂದರ್ಭದಲ್ಲಿ ಹೆಚ್ಚು ಉಪಯುಕ್ತ. ವೈದ್ಯರ ಕೊರತೆಯನ್ನು ನೀಗಿಸುವ ಜತೆಗೆ ಸೋಂಕು ತಗಲುವ ಅಪಾಯವನ್ನು ದೂರ ಮಾಡುತ್ತದೆ.
ಕೊವಿಡ್ ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚು ಮುಂಜಾಗ್ರತೆ ವಹಿಸುವುದು ಅನಿವಾರ್ಯವಾದರೂ, ರೋಗಿಗಳ ತಪಾಸಣೆ ನಿಲ್ಲಿಸಲಾಗದು. ಈ ನಿಟ್ಟಿನಲ್ಲಿ ತಂತ್ರಜ್ಞಾನದ ನೆರವು ಪಡೆದಿರುವ ಪಲ್ಮನಾಲಜಿಸ್ಟ್ ಡಾ. ಚಂದ್ರಶೇಖರ್ ಅವರು ವರ್ಚುಯಲ್ ಕ್ಲಿನಿಕ್ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಜ್ಞ ವೈದ್ಯರ ಕೊರತೆ ಇರುವ ದೂರದ ಊರುಗಳಲ್ಲಿರುವ ರೋಗಿಗಳು ಸಹ ಈ ವರ್ಚುಯಲ್ ಕ್ಲಿನಿಕ್ನ ನೆರವು ಪಡೆಯಬಹುದು. ಆನ್ಲೈನ್ ಮೂಲಕ ಎಲ್ಲ ಪರೀಕ್ಷೆಗಳ (ಲ್ಯಾಬ್) ವರದಿಯನ್ನು ಪರಿಶೀಲಿಸಿ ವೈದ್ಯರು ಆನ್ಲೈನ್ ಮೂಲಕವೇ ಅಗತ್ಯ ಚಿಕಿತ್ಸೆ/ಔಷಧ ಸೇವನೆಗೆ ಸೂಚಿಸಬಹುದು.
ವರ್ಚುಯಲ್ ಕ್ಲಿನಿಕ್ ವ್ಯವಸ್ಥೆ ಪರಿಶೀಲಿಸಿ ವೈದ್ಯರಿಂದ ಮಾಹಿತಿ ಪಡೆದ ಡಾ. ಅಶ್ವತ್ಥನಾರಾಯಣ, “ತಜ್ಞ ವೈದ್ಯರು ಎಲ್ಲೇ ಇದ್ದರೂ ರೋಗಿಗಳನ್ನು ಪರೀಕ್ಷಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಲು ಸಾಧ್ಯವಾಗುವ ವರ್ಚುಯಲ್ ಕ್ಲಿನಿಕ್ ಈ ಸಂಕಷ್ಟದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ, ಈ ತಂತ್ರಜ್ಞಾನವನ್ನು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುವುದು,”ಎಂದಿದ್ದಾರೆ.
ಏನಿದು ವರ್ಚುಯಲ್ ಕ್ಲಿನಿಕ್?
ಆಸ್ಪತ್ರೆಗೆ ಬರುವ ರೋಗಿಗಳ ಎಲ್ಲ ವರದಿಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿದ ಬಳಿಕ ಅವರ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ವೈದ್ಯರು ಸಂವಾದ ನಡೆಸುವರು. ಕ್ಯಾಮರಾ ಮೂಲಕ ರೋಗ ಲಕ್ಷಣಗಳನ್ನು ಗಮನಿಸುವ ಜತೆಗೆ, ದಾದಿಯರು ಹಿಡಿಯುವ ಸ್ಟೆತಸ್ಕೋಪ್ನಿಂದ ರೋಗಿಯ ಹೃದಯದ ಬಡಿತವನ್ನು ಆಲಿಸುವರು. ಇದನ್ನು ಆಧರಿಸಿ ಚಿಕಿತ್ಸೆ ಕುರಿತು ಸಲಹೆ ನೀಡುವರು. ವರ್ಚುಯಲ್ ಕ್ಲಿನಿಕ್ನಲ್ಲಿ ಶ್ವಾಸಕೋಶದ ತೊಂದರೆ, ಜ್ವರ, ಶೀತ ಹಾಗೂ ಚರ್ಮ ರೋಗದ ತಪಾಸಣೆಯೂ ಸಾಧ್ಯ.
ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಪತ್ತೆ ಹಚ್ಚುವಿರಾ?: ನಿಮ್ಮಕಣ್ಣಿನ ದೃಷ್ಟಿ, ತಾಳ್ಮೆಗೊಂದು ಸವಾಲು!