More

    ಲಾಕ್​ಡೌನ್​ ಸಮಯದ ಸಂಚಾರಿ ಪಾಸ್​ ಬಗ್ಗೆ ಗೊಂದಲವಿದೆಯೇ? ಕೆಎಸ್​ಪಿ ನೀಡಿದ ಉಪಯುಕ್ತ ಮಾಹಿತಿ ಇಲ್ಲಿವೆ…

    ಬೆಂಗಳೂರು: ಕರೊನಾ ಮುಕ್ತ ಮಾಡಲು ಲಾಕ್​ಡೌನ್​ ಹೇರಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಸಂಚಾರ ಮಾಡುವವರನ್ನು ನಿರ್ಬಂಧಿಸಲು ಸರ್ಕಾರ ಪಾಸ್​ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅಗತ್ಯ ಕಾರ್ಯಗಳಿಗಾಗಿ ಪಾಸ್ ಸೌಲಭ್ಯ ದೊರೆಯಲಿದ್ದು, ಈ ಸಂಬಂಧ ಸಾರ್ವಜನಿಕರಲ್ಲಿ ಉಂಟಾಗಿರುವ ಅನೇಕ ಗೊಂದಲಗಳಿಗೆ ಕರ್ನಾಟಕ ರಾಜ್ಯ ಪೊಲೀಸ್​ ಸ್ಪಷ್ಟನೆಯನ್ನು ನೀಡಿದ್ದು, ಈ ಕೆಳಕಂಡಂತಿದೆ.

    ಯಾರಿಗೆ ಪಾಸ್‌ ಬೇಡ?
    * ಅಗತ್ಯ ಕರ್ತವ್ಯದಲ್ಲಿರುವ ಸರ್ಕಾರಿ ಅಧಿಕಾರಿಗಳು: ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಕಡ್ಡಾಯವಾಗಿ ತಮ್ಮ ಇಲಾಖೆಯ ಗುರುತಿನ ಚೀಟಿಯನ್ನು ಹೊಂದಿರಬೇಕು.
    * ವೈದ್ಯಕೀಯ ವೃತ್ತಿಪರರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿ: ಸಮವಸ್ತ್ರದಲ್ಲಿ ಪ್ರಯಾಣಿಸಬೇಕು.
    *ಮಾಧ್ಯಮ ಸಿಬ್ಬಂದಿ (ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮ): ಸಂಬಂಧಿತ ಮಾಧ್ಯಮ ಸಂಸ್ಥೆ ನೀಡಿದ ಮಾನ್ಯತಾ ಕಾರ್ಡ್ ಅಥವಾ ಗುರುತಿನ ಚೀಟಿ ಹೊಂದಿರಬೇಕು
    * “ಜಿ” ನೋಂದಣಿ ಸಂಖ್ಯೆಗಳನ್ನು ಹೊಂದಿರುವ ಸರ್ಕಾರಿ ವಾಹನಗಳು
    * ಅಗತ್ಯ ಕರ್ತವ್ಯದಲ್ಲಿರುವ ಬ್ಯಾಂಕ್ ನೌಕರರು: ತಮ್ಮ ಬ್ಯಾಂಕ್‌ನಿಂದ ಪಡೆದಿರುವ ಗುರುತಿನ ಚೀಟಿಯನ್ನು ಹೊಂದಿದ್ದರೆ ಕರ್ತವ್ಯಕ್ಕೆ ಹಾಜರಾಗಬಹುದು.

    ಯಾರಿಗೆ ಪಾಸ್‌ ಬೇಕು?
    * ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆಯಲ್ಲಿ ತೊಡಗಿರುವ ಖಾಸಗಿ ವ್ಯಕ್ತಿಗಳು ಲಾಕ್‌ಡೌನ್‌ ಸಮಯದಲ್ಲಿ ಮುಕ್ತವಾಗಿ ಪ್ರಯಾಣಿಸಲು ಪಾಸ್ ಅಗತ್ಯವಿದೆ. ಆದರೆ ಇವುಗಳಿಗೆ ಸಂಬಂಧಿಸಿದ ಕೆಲಸಕ್ಕೆ ಮಾತ್ರ ಹಾಜರಾಗಲು ಅವರಿಗೆ ಅನುಮತಿ ಇದೆ.

    ಈ ಸೇವೆಯಡಿ ಬರುವವರ ವಿವರ ಹೀಗಿದೆ:
    * ಪಡಿತರ ಅಂಗಡಿಗಳು (ಪಿಡಿಎಸ್ ಅಡಿಯಲ್ಲಿ), ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಡೈರಿ ಸೇರಿದಂತೆ ಅಂಗಡಿಗಳು ಮತ್ತು ಹಾಲಿನ ಬೂತ್‌ಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಮೇವು
    * ವಿಮಾ ಕಚೇರಿಗಳು
    * ದೂರಸಂಪರ್ಕ, ಇಂಟರ್‌ನೆಟ್‌ ಸೇವೆಗಳು, ಪ್ರಸಾರ ಮತ್ತು ಕೇಬಲ್ ಸೇವೆಗಳು, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳು (ಅಗತ್ಯ ಸೇವೆಗಳಿಗೆ ಮಾತ್ರ)
    * ಆಹಾರ, ಔಷಧ, ವೈದ್ಯಕೀಯ ಉಪಕರಣಗಳು ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳನ್ನು ಇ-ಕಾಮರ್ಸ್ ಪ್ಲ್ಯಾಟ್‌ಫಾರ್ಮ್‌ಗಳ ಮೂಲಕ ತಲುಪಿಸುವುದು
    * ಪೆಟ್ರೋಲ್ ಬಂಕ್‌ಗಳು, ಎಲ್‌ಪಿಜಿ ಮತ್ತು ಗ್ಯಾಸ್ ಚಿಲ್ಲರೆ ಮತ್ತು ಶೇಖರಣಾ ಮಳಿಗೆಗಳು
    * ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು
    * ಸೆಕ್ಯುರಿಟೀಸ್ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ ಸೂಚನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಬಂಡವಾಳ ಮತ್ತು ಸಾಲ ಮಾರುಕಟ್ಟೆ ಸೇವೆಗಳು
    * ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮಿನ ಸೇವೆಗಳು
    * ಬೇಕರಿ, ಬಿಸ್ಕತ್ತು, ಕಾಂಡಿಮೆಂಟ್ಸ್, ಮಿಠಾಯಿ ಮತ್ತು ಸಿಹಿ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳು

    ಆಸ್ಪತ್ರೆಗೆ ಹೋಗಲು ಪಾಸ್‌ ಬೇಕೆ?
    * ಯಾವುದಾದರೂ ತುರ್ತು ವೈದ್ಯಕೀಯ ಅಗತ್ಯವಿದ್ದಲ್ಲಿ ಅಥವಾ ಸಂಬಂಧಿಕರ ನಿಧನದ ಸಂದರ್ಭಗಳಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪ್ರಯಾಣಿಸಬೇಕಾದ ಸಂದರ್ಭಗಳಲ್ಲಿ ಎಲ್ಲ ಪೊಲೀಸ್ ಠಾಣೆಗಳಲ್ಲಿ ತುರ್ತು ಪಾಸ್ ಲಭ್ಯವಿರುತ್ತದೆ. ಈ ಪಾಸ್‌ 12 ಗಂಟೆಗಳ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಅವಧಿಯ ಒಳಗೆ ಪಾಸನ್ನು ಪೊಲೀಸ್ ಠಾಣೆಗೆ ಹಿಂತಿರುಗಿಸಬೇಕು. ಪಾಸ್‌ ಪಡೆಯುವ ಮುನ್ನ ಸರ್ಕಾರ ನೀಡಿರುವ ಯಾವುದಾದರೊಂದು ಗುರುತಿನ ಚೀಟಿಯನ್ನು ಪೊಲೀಸ‌ ಠಾಣೆಗೆ ನೀಡುವುದು ಕಡ್ಡಾಯ.

    * ಒಂದು ವೇಳೆ ವೈದ್ಯಕೀಯ ತುರ್ತುಸ್ಥಿತಿಗೆ ಬೆಂಗಳೂರು ನಗರದ ಗಡಿಯನ್ನು ಮೀರಿ ಪ್ರಯಾಣ ಮಾಡುವ ಅಗತ್ಯ ಕಂಡುಬಂದಲ್ಲಿ, ಒಂದು ಗುರುತಿನ ಚೀಟಿಯ ಜತೆ, ಸ್ಥಳೀಯ ಡಿಸಿಪಿ ಕಚೇರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಬೇಕು. ಇದರಲ್ಲಿ ಹೊರಗೆ ಹೋಗಬೇಕಿರುವ ತುರ್ತು ಕಾರಣಗಳ ಬಗ್ಗೆ ವಿವರಣೆ ಸಲ್ಲಿಸಬೇಕು. ಈ ಅರ್ಜಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ, ಅಧಿಕಾರಿಗಳು ಪ್ರಯಾಣ ಮಾಡುವ ಸಂಬಂಧ ಅನುಮತಿ ಪತ್ರ ನೀಡುತ್ತಾರೆ. ಆದಾಗ್ಯೂ, ಈ ಅನುಮತಿ ಪತ್ರ ಇನ್ನೊಂದು ಪೊಲೀಸ್‌ ಠಾಣೆ ವ್ಯಾಪ್ತಿಯ ಪೊಲೀಸರ ಸಹಮತವನ್ನು ಖಾತರಿಪಡಿಸುವುದಿಲ್ಲ. ಮುಂದಿನ ಕ್ರಮವು ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯ ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ.

    ಪಕ್ಕದ ಜಿಲ್ಲೆಗೆ ಪ್ರಯಾಣಿಸಲು ಪಾಸ್‌ ಅಗತ್ಯವಿದೆಯೆ?
    ಲಾಕ್‌ಡೌನ್ ಅವಧಿಯಲ್ಲಿ ಎಲ್ಲಾ ರೀತಿಯ ಪ್ರಯಾಣಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ನಗರ ವ್ಯಾಪ್ತಿಯಿಂದ ಹೊರಕ್ಕೆ ಹೋಗಬೇಕಾಗಿ ಬಂದರೆ, ಒಂದು ಗುರುತಿನ ಚೀಟಿಯ ಜತೆ, ಸ್ಥಳೀಯ ಡಿಸಿಪಿ ಕಚೇರಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಬೇಕು. ಇದರಲ್ಲಿ ಹೊರಗೆ ಹೋಗಬೇಕಿರುವ ತುರ್ತು ಕಾರಣಗಳ ಬಗ್ಗೆ ವಿವರಣೆ ಸಲ್ಲಿಸಬೇಕು. ಈ ಅರ್ಜಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ, ಅಧಿಕಾರಿಗಳು ಪ್ರಯಾಣ ಮಾಡುವ ಸಂಬಂಧ ಅನುಮತಿ ಪತ್ರ ನೀಡುತ್ತಾರೆ. ಆದಾಗ್ಯೂ, ಈ ಅನುಮತಿ ಪತ್ರ ಇನ್ನೊಂದು ಪೊಲೀಸ್‌ ಠಾಣೆ ವ್ಯಾಪ್ತಿಯ ಪೊಲೀಸರ ಸಹಮತವನ್ನು ಖಾತರಿಪಡಿಸುವುದಿಲ್ಲ. ಮುಂದಿನ ಕ್ರಮವು ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯ ಅಧಿಕಾರಿಗಳ ವಿವೇಚನೆಗೆ ಒಳಪಟ್ಟಿರುತ್ತದೆ.

    ಔಷಧಗಳನ್ನು ಖರೀದಿಸಲು ಪಾಸ್‌ ಅಗತ್ಯವಿದೆಯೆ?
    * ಲಾಕ್‌ಡೌನ್‌ ಸಮಯದಲ್ಲಿ ಎಲ್ಲಾ ವೈದ್ಯಕೀಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಮನೆಯ ಸಮೀಪವೇ ಇರುವ (ವಾಕೇಬಲ್‌ ಡಿಸ್‌ಟೆನ್ಸ್‌) ಔಷಧೀಯ ಅಂಗಡಿಗೆ ಹೋಗಿ ಅದನ್ನು ಖರೀದಿಸಲು ಅನುಮತಿ ಇದೆ.
    * ಆದ್ದರಿಂದ ಯಾವುದೇ ಪಾಸ್‌ ಇಲ್ಲದೇ ಸಮೀಪದ ಅಂಗಡಿಗಳಿಗೆ ಹೋಗಿ ಔಷಧವನ್ನು ಖರೀದಿಸಬಹುದು. ಮುಖ್ಯ ರಸ್ತೆಗಳನ್ನು ಮಾತ್ರ ಪೊಲೀಸರು ಬ್ಲಾಕ್‌ ಮಾಡಿರುತ್ತಾರೆ, ಒಳರಸ್ತೆಗಳನ್ನು ಲಾಕ್‌ ಮಾಡಿರುವುದಿಲ್ಲ.

    ದಿನಸಿಗಳನ್ನು ಖರೀದಿಸಲು ಪಾಸ್‌ ಅಗತ್ಯವಿದೆಯೆ?
    * ಲಾಕ್ ಡೌನ್ ಸಮಯದಲ್ಲಿಯೂ ಕಾರ್ಯನಿರ್ವಹಿಸಲು ಎಲ್ಲಾ ಕಿರಾಣಿ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಆದ್ದರಿಂದ ಮನೆಯ ಸಮೀಪವೇ ಇರುವ ಅಂಗಡಿಗಳಿಂದ ದಿನಸಿ ವಸ್ತುಗಳನ್ನು ಖರೀದಿಸಬಹುದು.

    * ಆದ್ದರಿಂದ ದಿನಸಿ ಖರೀದಿಗೆ ಯಾವುದೇ ಪಾಸ್‌ ಅಗತ್ಯವಿಲ್ಲ. ಆದರೆ ಮನೆಯಿಂದ ವಾಕೇಬಲ್‌ ಡಿಸ್ಟೆನ್ಸ್‌ ಇರುವ ಅಂಗಡಿಗಳಿಗೆ ಮಾತ್ರ ಹೋಗಬೇಕು. ಮುಖ್ಯ ರಸ್ತೆಗಳನ್ನು ಮಾತ್ರ ಪೊಲೀಸರು ಬ್ಲಾಕ್‌ ಮಾಡಿರುತ್ತಾರೆ, ಒಳರಸ್ತೆಗಳನ್ನು ಲಾಕ್‌ ಮಾಡಿರುವುದಿಲ್ಲ.

    * ಬೆಳಗಿನ ಸಮಯದಲ್ಲಿ ವಾಕಿಂಗ್, ಜಾಗಿಂಗ್ ಹೋಗಲು ಪಾಸ್‌ ಅಗತ್ಯವಿದೆಯೆ?
    ಲಾಕ್‌ಡೌನ್‌ ಸಮಯದಲ್ಲಿ ವಾಕಿಂಗ್‌, ಜಾಗಿಂಗ್‌ ಎಲ್ಲವನ್ನೂ ನಿಷೇಧಿಸಲಾಗಿದೆ. ಆದ್ದರಿಂದ ಮನೆಯ ಆವರಣದಲ್ಲಿಯೇ ನೀವು ಇವೆಲ್ಲವನ್ನೂ ಮಾಡಬಹುದು.

    ಮನೆಯ ಹಿರಿಯರನ್ನು ನೋಡಲು ಹೋಗಬಹುದೆ?
    ಲಾಕ್‌ಡೌನ್‌ ಸಮಯದಲ್ಲಿ ಎಲ್ಲ ರೀತಿಯ ಪ್ರಯಾಣಗಳನ್ನು ನಿಷೇಧಿಸಲಾಗಿದೆ. ಆದ್ದರಿಂದ ತೀರಾ ಅಗತ್ಯ ಇಲ್ಲದಿದ್ದರೆ ಪ್ರಯಾಣಿಸಬಾರದು. ಒಂದು ವೇಳೆ ವಯಸ್ಸಾದವರಿಗೆ ಯಾವುದಾದರೂ ಅಗತ್ಯ ವಸ್ತುಗಳು ಬೇಕಾದಲ್ಲಿ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡಿ ಅದನ್ನು ಅವರಿದ್ದಲ್ಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಆನ್‌ಲೈನ್‌ ವ್ಯವಸ್ಥೆ ಸಾಧ್ಯವಾಗದಿದ್ದ ಪಕ್ಷದಲ್ಲಿ ಹಿರಿಯರು ಸಹಾಯವಾಣಿ (1090, 080-22943226, 9243737220, 9243737230)ಗೆ ಕರೆ ಮಾಡುವ ಮೂಲಕ ಸಹಾಯ ಪಡೆಯಬಹುದು. ಅಂಥ ಸಮಯದಲ್ಲಿ ಸ್ಥಳೀಯ ಆಡಳಿತವು ಅವರ ನೆರವಿಗೆ ಹೋಗುತ್ತದೆ. ಒಂದು ವೇಳೆ ತುರ್ತಾಗಿ ಪೊಲೀಸರ ನೆರವು ಬೇಕಿದ್ದರೆ 100 ಕ್ಕೆ ಕರೆ ಮಾಡಿ ಸಹಾಯ ಪಡೆಯಬಹುದು. ಸ್ಥಳೀಯ ಪೊಲೀಸರು ಕೂಡ ಹಿರಿಯರ ಸೇವೆ ಒದಗಿಸುತ್ತಾರೆ.

    ಬ್ಯಾಂಕ್‌ಗೆ ಹೋಗಲು ಪಾಸ್‌ ಅಗತ್ಯವಿದೆಯೆ?
    ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಆದ್ದರಿಂದ ಹತ್ತಿರದ ಯಾವುದೇ ಎಟಿಎಂಗೆ ವಾಕ್ ಮೂಲಕ ಹೋಗಬಹುದು. ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಕೂಡ ನಿಯಮಿತವಾಗಿ ಲಭ್ಯ ಇವೆ. ಈ ಸಮಯದಲ್ಲಿ ಆನ್‌ಲೈನ್ ಪಾವತಿ ವಿಧಾನಗಳನ್ನು ಸಹ ಬಳಸಿಕೊಳ್ಳಬಹುದು. ಇದರ ಹೊರತಾಗಿಯೂ ಎಲ್ಲಾ ಬ್ಯಾಂಕುಗಳಲ್ಲಿ ಎಟಿಎಂ ಸೇವೆಗಳು ಮತ್ತು ಕ್ಯಾಷಿಯರ್ ಡೆಸ್ಕ್ ಕಾರ್ಯನಿರ್ವಹಿಸುತ್ತವೆ.

    ಸಾಕು ಪ್ರಾಣಿಗೆ ಆಹಾರ ಖರೀದಿಸಲು ಹೋಗಬಹುದೆ?
    ಆನ್‌ಲೈನ್‌ ಶಾಪಿಂಗ್‌ ವೆಬ್‌ಸೈಟ್‌ ಮೂಲಕ ಅದನ್ನು ಖರೀದಿಸಬಹುದು. ನಿಮ್ಮ ಮನೆಯ ಬಾಗಿಲಿಗೆ ವಸ್ತುಗಳು ಬರುತ್ತವೆ.

    ದಿನಸಿ ಅಂಗಡಿ ತೆರೆಯಲು ಪಾಸ್‌ ಅಗತ್ಯವಿದೆಯೆ?
    ಅಂಗಡಿ ಓಪನ್‌ ಮಾಡಲು ಯಾವುದೇ ಪಾಸ್‌ ಅಥವಾ ಪರವಾನಗಿ ಅಗತ್ಯವಿಲ್ಲ. ಏಕೆಂದರೆ ಇದು ಅಗತ್ಯ ಸೇವೆಗಳ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಅಂಗಡಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಬೇರೆ ಸ್ಥಳದಿಂದ ಬರಬೇಕಾಗಿದ್ದರೆ ಆಗ ಪಾಸ್‌ ಅಗತ್ಯವಿದೆ. ದೂರದ ಸ್ಥಳದಿಂದ ಸಿಬ್ಬಂದಿಯನ್ನು ವಾಹನದ ಮೂಲಕ ಕರೆ ತರುವುದಿದ್ದರೂ ಪಾಸ್‌ ಕಡ್ಡಾಯ. ಅಂಗಡಿ ಮಾಲೀಕರು ಪಾಸ್‌ ಪಡೆಯಬಹುದಾದ ವೆಬ್‌ಸೈಟ್‌: https://kspclearpass.mygate.com/signup

    ಸಂಸ್ಥೆಯ ಉದ್ಯೋಗಿಗಳಿಗೆ ಪಾಸ್‌ ದೊರಕಿಸಲು ಏನು ಮಾಡಬೇಕು?
    ಅಗತ್ಯ ಸರಕು ಮತ್ತು ಸೇವೆಗಳ ಪೂರೈಕೆಯಲ್ಲಿ ತೊಡಗಿರುವ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಅಗತ್ಯ ಸಿಬ್ಬಂದಿಗೆ ಆನ್‌ಲೈನ್‌ ಮೂಲಕ ಪಾಸ್‌ ದೊರಕಿಸಿಕೊಡಬಹುದು. ವೆಬ್‌ಸೈಟ್‌ ವಿಳಾಸ: https://kspclearpass.mygate.com/signup

    ಪಾಸ್‌ನ ವ್ಯಾಲಿಡಿಟಿ ಎಷ್ಟು ದಿನ ಇರುತ್ತದೆ?
    ಅರ್ಜಿದಾರ ಅವಶ್ಯಕತೆಗೆ ಅನುಗುಣವಾಗಿ ಆಯಾ ಅಧಿಕಾರಿಗಳು ವ್ಯಾಲಿಡಿಟಿಯನ್ನು ನಿರ್ಧರಿಸುತ್ತಾರೆ.

    ಪಾಸ್‌ನ ಹಾರ್ಡ್‌ಕಾಪಿ ಅಥವಾ ಸಾಫ್ಟ್‌ಕಾಪಿ ಯಾವುದನ್ನು ಕೊಂಡೊಯ್ಯಬೇಕು?
    ವೆಬ್‌ ಅಪ್ಲಿಕೇಷನ್‌ನಲ್ಲಿ ಡಿಜಿಟಲ್‌ ಕಾಪಿ ಇರುತ್ತದೆ. ಅಗತ್ಯ ಇದ್ದಲ್ಲಿ ಪ್ರಿಂಟೆಡ್‌ ಕಾಪಿಯನ್ನೂ ಒಯ್ಯಬಹುದು.

    *ಆನ್‌ಲೈನ್‌ ಕೆಎಸ್‌ಪಿ ಕ್ಲಿಯರ್‌ ಪಾಸ್‌ ಕುರಿತಂತೆ ಯಾವುದಾದರೂ ಸಂದೇಹಗಳು ಇಲ್ಲದರೆ ಈ ಸಹಾಯವಾಣಿಗೆ ಕರೆ ಮಾಡಿ
    080-22942200
    080-22942325
    080-22942330

    ಪಡಿತರ ಚೀಟಿ ಇಲ್ಲದಿದ್ದರೂ ಸಾರ್ವಜನಿಕರಿಗೆ ಪಡಿತರ ನೀಡುವಂತೆ ಸಿಎಂ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts