ಕಳಸ: ಕಳಸ ತಾಲೂಕು ಕೇಂದ್ರದ ಕಾರ್ಯಾರಂಭದ ಬಗ್ಗೆ ಯಾರಿಗೂ ಅನುಮಾನ ಬೇಡ. ಕರೊನಾದಿಂದ ಸ್ವಲ್ಪ ವಿಳಂಬವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕರೊನಾ ಕಾರಣದಿಂದ ಕಳಸ ತಾಲೂಕು ಕೇಂದ್ರದ ಆರಂಭಕ್ಕೆ ಹಿನ್ನಡೆಯಾಗಿದೆ. ತಾಲೂಕು ಕೇಂದ್ರದ ಪ್ರಕ್ರಿಯೆ ಆರಂಭವಾದ ಕೂಡಲೇ 300 ಕೋಟಿ ರೂ. ಮೀಸಲಿಡಬೇಕು. ಆದ್ದರಿಂದ ಸ್ವಲ್ಪ ವಿಳಂಬವಾಗಿದೆ. ಇರುವ ವ್ಯವಸ್ಥೆಯಲ್ಲಿಯೇ ಶೀಘ್ರದಲ್ಲಿ ತಾಲೂಕು ಕೇಂದ್ರ ಆರಂಭಿಸಲು ಚಿಂತನೆ ನಡೆಸಲಾಗಿದೆ. ಚುನಾವಣೆ ಮುಗಿದ ಕೂಡಲೇ ಸ್ಥಳೀಯ ಮುಖಂಡರೊಂದಿಗೆ ಮತ್ತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇನಾಂ ಭೂಮಿ ಸಂತ್ರಸ್ತರಿಗೆ ಪರ್ಯಾಯ ಭೂಮಿ ನೀಡಲು ಭೂಮಿ ಗುರುತಿಸಲಾಗಿದೆ. ರೈತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಸರ್ಕಾರ ಎಲ್ಲ್ಲ ಕ್ರಮ ಕೈಗೊಳ್ಳಲಿದೆ. ಎಳೆನೀರು -ದಿಡುಪೆಯ ಧರ್ಮಸ್ಥಳವನ್ನು ಸಂರ್ಪಕಿಸುವ ರಸ್ತೆಯಲ್ಲಿ ಅರಣ್ಯ ಭೂಮಿ ಇರುವುದರಿಂದ ಮತ್ತು ಸಾವಿರಾರು ಮರಗಳು ನಾಶವಾಗುತ್ತದೆ ಎಂಬ ತಪ್ಪು ಮಾಹಿತಿಯಿಂದ ರಸ್ತೆ ದುರಸ್ತಿಗೆ ತೊಡಕಾಗಿದೆ ಎಂದರು.
ಶಾಸಕ ಎಂ.ಪಿ.ಕುಮಾರಸ್ವಾಮಿ, ಕಳಸ ಬಿಜೆಪಿ ಅಧ್ಯಕ್ಷ ನಾಗಭೂಷಣ್, ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಉಪಾಧ್ಯಕ್ಷ ಗಿರೀಶ್ ಹೆಮ್ಮಕ್ಕಿ, ತಾಪಂ ಮಾಜಿ ಅಧ್ಯಕ್ಷ ಎಂ.ಎ.ಶೇಷಗಿರಿ ಇದ್ದರು.