ಮೈಸೂರು: ಸಾವಿನ ಭೀಕರತೆ ಯಾವ ರೂಪದಲ್ಲಿ ಬರಲಿದೆ ಎಂಬುದು ಊಹೆಗೂ ನಿಲುಕದ್ದು. ತಾವು ಎತ್ತಿ ಆಡಿಸಿ ಬೆಳೆಸಿದ ಮಗ ಸತ್ತರೂ ಅವನ ಅಂತಿಮ ದರ್ಶನ ಪಡೆಯುವ ಭಾಗ್ಯ ತಂದೆ-ತಾಯಿ ಮತ್ತು ಇಬ್ಬರು ಅಕ್ಕಂದಿರಿಗೂ ಸಿಗಲಿಲ್ಲ. ಮನೆಮಗ ಬಾರದ ಲೋಕಕ್ಕೆ ಹೋದ ನಾಲ್ಕೇ ದಿನಕ್ಕೆ ಮನೆಯ ಯಜಮಾನ ಅಂದ್ರೆ ಆತನ ತಂದೆಯನ್ನೂ ಬಿಡಲಿಲ್ಲ ಜವರಾಯ. ಯಜಮಾನನ ಅಂತ್ಯಸಂಸ್ಕಾರ ನೆರವೇರಿಸುವ ಅವಕಾಶವೂ ಇಲ್ಲದಾಯಿತು ಪತ್ನಿಗೆ…
ಈ ಕರುಣಾಜನಕ ಕಥೆಯ ಸೂತ್ರಧಾರಿ ಬೇರೆ ಯಾರೂ ಅಲ್ಲ, ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19. ಅಂದಹಾಗೆ ಇದು ಮೈಸೂರಿನ ಕೃಷಿ ಇಲಾಖೆಯ ಸಹಾಯಕ ಇಂಜಿನಿಯರ್ ಕುಟುಂಬಕ್ಕೆ ಬಂದೊದಗಿರುವ ದುಸ್ಥಿತಿ.
ಇದನ್ನೂ ಓದಿರಿ ಮದುವೆ ತಂದ ಆಪತ್ತು; ಕೋವಿಡ್ಗೆ ವರನ ತಂದೆ, ವಧುವಿನ ತಾಯಿ ಬಲಿ; ಒಂದೇ ಕುಟುಂಬದ 32 ಜನರಿಗೆ ಸೋಂಕು
ಜು.10ರಂದು ಇಂಜಿನಿಯರ್ ಕುಟುಂಬದ ಎಲ್ಲರಗೂ ಅಂದರೆ ಪತಿ(ಇಂಜಿನಿಯರ್), ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನಿಗೆ ಕರೊನಾ ಪಾಸಿಟಿವ್ ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಕುಟುಂಬ ಸಮೇತ ಆಸ್ಪತ್ರೆಗೆ ದಾಖಲಾಗಿದ್ದರು. ಜು.15ರಂದು 14 ವರ್ಷದ ಪುತ್ರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ. ಆದರೆ, ತಂದೆ-ತಾಯಿ ಹಾಗೂ ಅಕ್ಕಂದಿರಿಗೆ ಮೃತನ ಅಂತಿಮ ದರ್ಶನ ಪಡೆಯಲು ಆಗಲಿಲ್ಲ.
ಇದಾದ ಮೂರೇ ದಿನಕ್ಕೆ ಅಂದ್ರೆ ನಿನ್ನೆ ರಾತ್ರಿ(ಶುಕ್ರವಾರ) ಖಾಸಗಿ ಆಸ್ಪತ್ರೆಯಲ್ಲಿ ಇಂಜಿನಿಯರ್(47) ಮೃತಪಟ್ಟಿದ್ದಾರೆ. ಇದೀಗ ಇವರ ಅಂತ್ಯಕ್ರಿಯೆಯಲ್ಲೂ ಪತ್ನಿ ಹಾಗೂ ಹೆಣ್ಣುಮಕ್ಕಳಿಗೆ ಭಾಗಿಯಾಗಲು ಆಗಿಲ್ಲ. ಇಡೀ ಸಂಸಾರಕ್ಕೆ ತಗುಲಿದ ಕರೊನಾ ಇಬ್ಬರನ್ನು ಬಲಿ ಪಡೆದು ಸಂಕಷ್ಟಕ್ಕೀಡು ಮಾಡಿದೆ. ಸದ್ಯ ಇಂಜಿನಿಯರ್ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.