ಮಂಗಳೂರು: ‘ವಿದ್ಯಾಗಮ’ದ ನಂತರವೇ ಅಮ್ಮನಿಗೆ ಈ ಸ್ಥಿತಿ ಬಂದಿದೆ. ಆಸ್ಪತ್ರೆಗೆ ದಾಖಲಾಗಿರುವ ಅಮ್ಮನನ್ನು ದಯವಿಟ್ಟು ಉಳಿಸಿಕೊಡಿ, ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡಿ… ಎಂದು ಸರ್ಕಾರಿ ಶಾಲೆ ಶಿಕ್ಷಕ ದಂಪತಿಯ ಪುತ್ರಿಯೊಬ್ಬರು ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಮೂಡಬಿದರೆಯ ಶಿಕ್ಷಕ ಕುಟುಂಬಕ್ಕೆ ಕರೊನಾ ಆಘಾತ ನೀಡಿದೆ. ಮೂಡಬಿದರೆಯ ಮಕ್ಕಿ ಜವಹಾರ್ ನೆಹರೂ ಹೈಸ್ಕೂಲ್ನ ಶಿಕ್ಷಕಿ ಪದ್ಮಾಕ್ಷಿ ಅವರಿಗೆ ಕರೊನಾ ಸೋಂಕು ತಗುಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ. ಇವರ ಪತಿ, ಮೂಡಬಿದರೆಯ ಡಿ.ಜೆ. ಹೈಯರ್ ಪ್ರೈಮರಿ ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ ಅವರಿಗೂ ಕರೊನಾ ದೃಢಪಟ್ಟಿದೆ.
ಪದ್ಮಾಕ್ಷಿ ಮತ್ತು ಶಶಿಕಾಂತ್ ದಂಪತಿ ಇಬ್ಬರಿಗೂ ಕರೊನಾ ಸೋಂಕು ಕಾಡುತ್ತಿದ್ದು, ಇವರ ಪುತ್ರಿ ಐಶ್ವರ್ಯಾ ಜೈನ್ ಆತಂಕಗೊಂಡಿದ್ದಾರೆ. ಸದ್ಯ ಅಮ್ಮನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ, ಆ ಮೂಲಕ ನನ್ನ ತಾಯಿಯನ್ನು ಉಳಿಸಿಕೊಡಿ ಎಂದು ಫೇಸ್ಬುಕ್ನಲ್ಲಿ ಫೋಟೋ ಸಹಿತ ಐಶ್ವರ್ಯಾ ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಿದ್ಯಾಗಮದ ಪರಿಣಾಮ ಅಮ್ಮನಿಗೆ ಈ ಸ್ಥಿತಿ ಬಂದಿದೆ ಎಂದೂ ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯಾಗಮಕ್ಕೂ ಮೊದಲು ಅಮ್ಮ ಆರಾಮಾಗಿದ್ದರು. ವಿದ್ಯಾಗಮದ ನಂತರವೇ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಹಾಗಾಗಿ ಮಕ್ಕಳು ಕಲಿಕೆಯಿಂದ ಹಿಂದುಳಿಯಬಾರದೆಂದು ಯೋಚಿಸಿದ ಸರ್ಕಾರ, ವಿದ್ಯಾಗಮ ಯೋಜನೆಯನ್ನು ಜಾರಿ ಮಾಡಿತ್ತು. ಸರ್ಕಾರಿ ಶಾಲೆ ಮಕ್ಕಳು ಇರುವಲ್ಲಿಗೇ ಹೋಗಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ನಡುವೆ ಕೆಲ ಶಿಕ್ಷಕರು ಮತ್ತು ಮಕ್ಕಳಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ ವಿದ್ಯಾಗಮ ವಿರುದ್ಧ ಅಪಸ್ವರ ಶುರುವಾಯ್ತು. ಬಹುತೇಕ ಪೋಷಕರು, ಶಿಕ್ಷಕರು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವರು ಧ್ವನಿಗೂಡಿಸಿದರು. ಈ ಯೋಜನೆಗೆ ಸರ್ಕಾರ ಇತ್ತೀಚಿಗಷ್ಟೇ ತಾತ್ಕಾಲಿಕ ಬ್ರೇಕ್ ಹಾಕಿದೆ.
ಪ್ಲೀಸ್… ಅಮ್ಮನನ್ನು ಉಳಿಸಿಕೊಡಿ ಎಂದ ಟೀಚರ್ ಮಗಳು: ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು