ಚಿತ್ರದುರ್ಗ: ಕರೊನಾ ಸೋಂಕು ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ ಮುರುಘಾ ಮಠದ ಆವರಣದಲ್ಲಿರುವ ವನಕ್ಕೆ ಮತ್ತೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಶ್ರೀ ಶಿವಮೂರ್ತಿ ಶರಣರು ಹೇಳಿದರು.
ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸೋಂಕು ಕಡಿಮೆ ಇದ್ದಾಗ ಅತ್ಯಂತ ಶಿಸ್ತು ಮತ್ತು ಜಾಗೃತೆಯಿಂದ ವರ್ತಿಸಿದ ಜನತೆ, ಸೋಂಕು ಪ್ರಮಾಣ ಏರಿಕೆ ವೇಳೆ ಉದಾಸೀನತೆ ತೋರುತ್ತಿದ್ದಾರೆ. ಇದು ಅಪಾಯ ಎಂದು ಎಚ್ಚರಿಸಿದರು.
ಕಲಿಯುಗ ಕರೊನಾ ಯುಗವಾಗುತ್ತಿದ್ದು, ಆಗಸ್ಟ್ನಲ್ಲಿ ಸೋಂಕಿತರ ಸಂಖ್ಯೆ ಇನ್ನು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಜ್ಞರು ಹೇಳುತ್ತಿದ್ದು, ಸದ್ಯಕ್ಕೆ ಜಾಗೃತಿಯೊಂದೇ ರೋಗಕ್ಕೆ ಪರಿಹಾರ ಎಂದರು. ಶರಣ ಸಂಸ್ಕೃತಿ ಉತ್ಸವಕ್ಕಾಗಿ ಈ ವೇಳೆಗೆ ಪೂರ್ವ ಸಿದ್ಧತೆಗಳು ಆರಂಭವಾಗಬೇಕಿತ್ತು. ಆದರೆ, ಸಾಧ್ಯವಾಗಿಲ್ಲ. ಈ ತಿಂಗಳ ಅಂತ್ಯದವರೆಗೂ ಪರಿಸ್ಥಿತಿ ಗಮನಿಸಿ ಉತ್ಸವದ ಕುರಿತಂತೆ ಸಭೆ ನಡೆಸುವುದಾಗಿ ಹೇಳಿದರು.
ಚಂದ್ರವಳ್ಳಿ ಹಾಗೂ ಮಠದ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಂಸದ ನಾರಾಯಣಸ್ವಾಮಿ ಅವರೊಂದಿಗೆ ಸದ್ಯದಲ್ಲೇ ಚರ್ಚೆ ನಡೆಸುವುದಾಗಿ ತಿಳಿಸಿದರು.