ಸಾಗರ: ಕರೊನಾ ಹಿನ್ನೆಲೆಯಲ್ಲಿ ಕ್ರಿಕೆಟ್ ಸೇರಿ ಬಹುತೇಕ ಕ್ರೀಡೆಗಳು ಸ್ಥಗಿತಗೊಂಡಿದ್ದರಿಂದ ಆಟಗಾರರು ತೀವ್ರ ನಿರಾಸೆ ಅನುಭವಿಸಿದ್ದರು. ಇದೀಗ ಗೋಪಾಲಗೌಡ ಕ್ರೀಡಾಂಗಣದಲ್ಲಿ ಪುನಃ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿ ಆರಂಭವಾಗಿರುವುದು ಯುವ ಆಟಗಾರರು ಹೆಚ್ಚು ಹುಮ್ಮಸ್ಸಿನಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಾಗಿದೆ ಎಂದು ನಗರಸಭೆ ಸದಸ್ಯ ಡಿ.ತುಕಾರಾಮ್ ಹೇಳಿದರು.
ನಗರದ ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಸಾಗರ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಬೆಂಗಳೂರಿನ ಮ್ಯಾಡ್ವ್ಯಾಕ್ಸ್ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಸೀಮಿತ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಬೆಂಗಳೂರಿನ ತಂಡ ಸಾಗರಕ್ಕೆ ಆಗಮಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದರಿಂದ ಅವರ ಕ್ರೀಡಾಕೌಶಲವನ್ನು ನಮ್ಮೂರಿನ ತಂಡದವರು ಕಲಿತುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಸಾಗರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ರವಿನಾಯ್ಡು, ಗೌರವಾಧ್ಯಕ್ಷ ಐ.ಎನ್.ಸುರೇಶಬಾಬು, ಪ್ರಧಾನ ಕಾರ್ಯದರ್ಶಿ ಡಿ.ಗಣೇಶ್, ಬೆಂಗಳೂರು ಕ್ರಿಕೆಟ್ ಸಂಸ್ಥೆಯ ಹೇಮಂತ್ ಇತರರಿದ್ದರು.