ಹಾರೋಹಳ್ಳಿ : ಮಹಾಮಾರಿ ಕರೊನಾ ಸೋಂಕಿನ ಬಗ್ಗೆ ನಾಗರಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ಸೋಂಕು ಮರುಕಳಿಸದಂತೆ ಎಚ್ಚರ ವಹಿಸಿ ಎಂದು ಶ್ರೀಕ್ಷೇತ್ರ ಮರಳೆಗವಿ ಮಠದ ಪೀಠಾಧಿಪತಿಗಳಾದ ಡಾ.ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.
ಮರಳೆಗವಿ ಮಠದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದೂವರೆ ವರ್ಷದಿಂದ ಕರೊನಾ ಸೋಂಕಿನಿಂದ ಜನರ ಜೀವನ ಜರ್ಜರಿತವಾಗಿದೆ. ಕೆಲವರಿಗೆ ಜೀವನ ನಿರ್ವಹಣೆಗೂ ಸಮಸ್ಯೆಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ಲಾಕ್ಡೌನ್ ಹೇರಿ ಸೋಂಕನ್ನು ನಿಯಂತ್ರಣಕ್ಕೆ ತಂದಿದ್ದು ಒಳ್ಳೆಯದೇ ಆಗಿದ್ದು, ಇದರಿಂದ ಸಮುದಾಯಕ್ಕೆ ಹರಡುವುದು ಕಡಿಮೆಯಾಗಿದೆ ಎಂದರು. ಸೋಂಕು ಮರುಕಳಿಸದಂತೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.
ಎರಡು ಡೋಸ್ ಲಸಿಕೆ ನೀಡುವುದರಿಂದ ಕರೊನಾ ತೀವ್ರತೆ ಕಡಿಮೆಯಾಗಲಿದೆ. ಒಂದುವೇಳೆ ಬಂದರೂ ಸಹ ಹೆದರುವ ಅವಶ್ಯಕತೆ ಇಲ್ಲ ಎಂದು ತಜ್ಞರು ಹೇಳಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವಾಗಿ ಎಲ್ಲರಿಗೂ ಲಸಿಕೆ ನೀಡುವ ಕೆಲಸಕ್ಕೆ ಮುಂದಾಗಲಿ ಎಂದರು. ಕರೊನಾ ಮುಕ್ತಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಶೀಘ್ರವಾಗಿ ಎಲ್ಲರಿಗೂ ಲಸಿಕೆ ನೀಡುವ ಕೆಲಸವಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.