ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ‘ಮಹಿಳೆಯರ ಮೇಲೆ ಈಗಲೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮಾ.16ರಂದು ನೋಟಿಸ್ ಜಾರಿ ಮಾಡಿದ್ದ ದೆಹಲಿ ಪೊಲೀಸರು ಇದೀಗ ಪ್ರಕರಣ ಸಂಬಂಧ ರಾಹುಲ್ ಅವರ ಮನೆಗೆ ಭೇಟಿ ನೀಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯಸಭಾ ಸಂಸದರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಜೈರಾಮ್ ರಮೇಶ್ ಸೇರಿದಂತೆ ಕಾಂಗ್ರೆಸ್ನ ಉನ್ನತ ನಾಯಕರು ಕೂಡ ಗಾಂಧಿ ನಿವಾಸಕ್ಕೆ ಆಗಮಿಸಿದ್ದಾರೆ. ಮನೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಹಲವಾರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಣ್ಣಿಗೊಂದು ಸವಾಲ್: ಸಾಧ್ಯವಾದ್ರೆ 10 ಸೆಕೆಂಡ್ನಲ್ಲಿ ಬಾವಲಿಗಳ ಮಧ್ಯೆ ಇರುವ ಬೆಕ್ಕು ಪತ್ತೆ ಹಚ್ಚಿ!
ಸಾಮಾಜಿಕ ಜಾಲತಾಣದ ಪೋಸ್ಟ್ಗಳನ್ನು ಗಮನದಲ್ಲಿಟ್ಟುಕೊಂಡು, ಪೊಲೀಸರು ರಾಹುಲ್ಗೆ ಪ್ರಶ್ನಾವಳಿಯನ್ನು ಕಳುಹಿಸಿದ್ದರು. ಆದರೆ, ಈವರೆಗೆ ರಾಹುಲ್ ಯಾವುದೇ ಉತ್ತರ ನೀಡಿಲ್ಲ. ಲೈಂಗಿಕ ಕಿರುಕುಳದ ಬಗ್ಗೆ ತನ್ನನ್ನು ಸಂಪರ್ಕಿಸುವ ಮಹಿಳೆಯರ ಬಗ್ಗೆ ವಿವರಗಳನ್ನು ನೀಡುವಂತೆ ರಾಹುಲ್ ಅವರನ್ನು ದೆಹಲಿ ಪೊಲೀಸರು ಕೇಳಿದ್ದರು.
ವಿಶೇಷ ಪೊಲೀಸ್ ಕಮಿಷನರ್ ಮಟ್ಟದ ಅಧಿಕಾರಿಯೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಮಹಿಳೆಯರ ಬಗ್ಗೆ ಮಾಹಿತಿ ಪಡೆಯಲು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ರಾಹುಲ್ರನ್ನು ಭೇಟಿ ಮಾಡಿದ ಮಹಿಳೆಯರ ವಿವರಗಳನ್ನು ಅವರಿಂದ ತಿಳಿದುಕೊಳ್ಳಲು ಪೊಲೀಸರು ಬಯಸುತ್ತಿದ್ದಾರೆ.
ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು “ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದಾಗಿ ನಾನು ಕೇಳಿದ್ದೇನೆ” ಎಂದು ಹೇಳಿದ್ದರು. ಹೀಗಾಗಿ ಸಂತ್ರಸ್ತರ ವಿವರಗಳನ್ನು ನೀಡುವಂತೆ ನಾವು ರಾಹುಲ್ ಅವರನ್ನು ಕೇಳಿದ್ದೇವೆ. ಮಾಹಿತಿ ನೀಡಿದರೆ, ಸಂತ್ರಸ್ತರಿಗೆ ರಕ್ಷಣೆ ಒದಗಿಸಲು ನೆರವಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೋಟಿಸ್ಗೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಕಾನೂನು ಪ್ರಕಾರ ನೋಟಿಸ್ಗೆ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇವೆ ಎಂದು ಹೇಳಿತ್ತು. ಪ್ರಧಾನಿ ಮೋದಿ ಮತ್ತು ಅದಾನಿ ಸಂಬಂಧದ ಬಗ್ಗೆ ರಾಹುಲ್ ಗಾಂಧಿಯವರು ಕೇಳಿರುವ ಪ್ರಶ್ನೆಗಳಿಂದ ಕೇಂದ್ರ ಸರ್ಕಾರ ತತ್ತರಿಸಿದೆ ಎಂದು ವ್ಯಂಗ್ಯವಾಡಿತ್ತು. ಇದೀಗ ದೆಹಲಿ ಪೊಲೀಸರು ರಾಹುಲ್ ಗಾಂಧಿ ಮನೆಗೆ ಭೇಟಿ ನೀಡಿದ್ದು, ಮುಂದೆ ಯಾವ ಬೆಳವಣಿಗೆ ಆಗಲಿದೆ ಎಂದು ಕಾದು ನೋಡಬೇಕಿದೆ. (ಏಜೆನ್ಸೀಸ್)
KSRTC ಬಸ್ ಚಾಲಕನ ಎಡವಟ್ಟು: ಬೈಕ್ ಸವಾರನ ಸಾವಿಗೆ ಕಾರಣವಾಯ್ತು ಮೈ-ಬೆಂ ಹೆದ್ದಾರಿ ಟೋಲ್ ಸಂಗ್ರಹ
ಕಣ್ಣಿಗೊಂದು ಸವಾಲ್: ಸಾಧ್ಯವಾದ್ರೆ 10 ಸೆಕೆಂಡ್ನಲ್ಲಿ ಬಾವಲಿಗಳ ಮಧ್ಯೆ ಇರುವ ಬೆಕ್ಕು ಪತ್ತೆ ಹಚ್ಚಿ!
VIDEO | ಸ್ನೇಹಿತರೊಂದಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ವಿದ್ಯಾರ್ಥಿ ಮೃತ್ಯು