ಮುಂಬೈ: ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಯುವತಿಯ ಜೀವ ರಕ್ಷಿಸಲು ಪೊಲೀಸ್ ಕಾನ್ಸ್ಟೆಬಲ್ ಓರ್ವರು ತಮ್ಮ ಜೀವವನ್ನೂ ಲೆಕ್ಕಿಸದೆ ಅದೇ ನದಿಗೆ ಧುಮುಕಿದ ಘಟನೆ ಮುಂಬೈನಲ್ಲಿ ನಡೆದಿದೆ.
ಬೋರಿವಾಲಿ ಬಳಿ ಮಿಥಿ ನದಿ ತುಂಬಿ ಹರಿಯುತ್ತಿತ್ತು. ಸಂಜಯ್ ಗಾಂಧಿ ಸರ್ಕಲ್ ಬಳಿ ಯುವತಿಯೋರ್ವಳು ನದಿಗೆ ಹಾರಿದ್ದಾಳೆ. ಇಲ್ಲಿ ನದಿ ಸುಮಾರು 30 ಅಡಿ ಆಳವಿದೆ ಎಂದು ಸ್ಥಳೀಯರು ಪೊಲೀಸರಿಗೆ ಹೇಳಿದರು. ಅಲ್ಲದೆ, ಆಕೆ ನದಿಯಲ್ಲಿ ತೇಲಿ ಹೋಗುತ್ತಿದ್ದಾಳೆ ಎಂದೂ ತಿಳಿಸಿದರು.
ಅಷ್ಟಕ್ಕೂ ಯುವತಿ ನದಿಗೆ ಬೇಕೆಂತಲೇ ಹಾರಿದಳೋ, ಬಿದ್ದಳೋ ಗೊತ್ತಾಗುತ್ತಿಲ್ಲ ಎಂದು ಸ್ಥಳೀಯರು ಅಲ್ಲಿಯೇ ಇದ್ದ ಪೊಲೀಸ್ಗೆ ತಿಳಿಸುತ್ತಿದ್ದಂತೆ, ಅವರು ಕಸ್ತೂರ ಬಾ ರಸ್ತೆಯಲ್ಲಿರುವ ಪೊಲೀಸ್ ಠಾಣೆಗೆ ವೈರ್ಲೆಸ್ ಮೆಸೇಜ್ ಕಳಿಸಿದರು. ಅಲ್ಲಿಂದ ದೌಲತ್ ನಗರ ಠಾಣೆಗೆ ಸಂದೇಶ ಹೋಯಿತು. ಇದನ್ನೂ ಓದಿ: ಹಿರಿಯ ಅಧಿಕಾರಿಗೆ ಪ್ಲಾಸ್ಮಾ ದಾನ ಮಾಡಿದ ಉರಿ ಪೊಲೀಸ್ಗೆ ಸನ್ಮಾನ
ಕೊನೆಗೆ ದೌಲತ್ ನಗರದಲ್ಲಿ ನದಿ ಬಳಿಯೇ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಅಭಿಮಾನ್ ಮೋರ್ ಎಂಬುವರು ಕೂಡಲೇ ನದಿಗೆ ಹಾರಿದ್ದಲ್ಲದೆ, ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಮಹಿಳೆಯನ್ನು ಹಿಡಿದು, ದಡಕ್ಕೆ ತಂದರು. ಅಷ್ಟರಲ್ಲಿ ಅಲ್ಲಿಗೆ ಅಗ್ನಿ ಶಾಮಕದಳದ ಸಿಬ್ಬಂದಿಯೂ ಆಗಮಿಸಿದ್ದರು.
ಯುವತಿಯನ್ನು ಸ್ನೇಹಲ್ ಎಂದು ಗುರುತಿಸಲಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ ಕಸ್ತೂರ್ ಬಾ ರಸ್ತೆ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಪ್ರಮೋದ್ ತವಡೆ ಅವರು ಅಭಿಮಾನ್ರನ್ನು ಹೊಗಳಿದ್ದಾರೆ. (ಏಜೆನ್ಸೀಸ್)
ಅಯೋಧ್ಯೆ ರಾಮ ಮಂದಿರ ಶಿಲ್ಯಾನ್ಯಾಸಕ್ಕೂ ಮುನ್ನ ಆಘಾತ, ಪ್ರಮುಖ ಅರ್ಚಕರೊಬ್ಬರಿಗೆ ಕರೊನಾ ವೈರಾಣು ಸೋಂಕು