ಬೆಳಗಾವಿ: ಜನರ ಸಹಕಾರದಿಂದಲೇ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು, ಕ್ಷೇತ್ರ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕ್ಷೇತ್ರದಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿ, ವಿಧಾನಸಭೆಗೆ ಸ್ಪರ್ಧಿಸುವಾಗ ಕ್ಷೇತ್ರವನ್ನು ಆಯ್ದುಕೊಳ್ಳುವುದು ಪ್ರಮುಖವಾಗಿರುತ್ತದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ನನ್ನ ಆಯ್ಕೆ ಅತ್ಯಂತ ಸಮರ್ಪಕವಾಗಿದೆ. ರಾಜಕೀಯ ಗೊಂದಲ, ಪ್ರಕೃತಿ ವಿಕೋಪದ ಮಧ್ಯೆಯೂ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಇಲ್ಲಿನ ಜನರೇ ಕಾರಣ. ಅವರ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗವುದು ಎಂದರು.
ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ನಿರ್ಮಿಸಿದ ಗ್ರಾಪಂ ಕಾರ್ಯಾಲಯ, ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡ, ಬೆಳವಟ್ಟಿ ಗ್ರಾಮದ ಬೆಳಗಾವಿ ರಾಯಲ್ಸ್ ರೌಂಡ್ಸ್ ಟೇಬಲ್-205ರ ಯೋಜನೆಯಡಿ ನಿರ್ಮಿಸಿದ ಮಾಧ್ಯಮಿಕ ವಿದ್ಯಾಲಯದಲ್ಲಿ ಕೊಠಡಿಗಳನ್ನು ಲೋಕಾರ್ಪಣೆಗೊಳಿಸಿದರು. ಮುತಗಾ ಗ್ರಾಮದ ಸಾಯಿ ನಗರದಲ್ಲಿ ಶಾಸಕರ ನಿಧಿಯಿಂದ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನದ ಸ್ಲಾಪ್ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಹೆಬ್ಬಾಳ್ಕರ್, ಆರೋಗ್ಯ ಮತ್ತು ವಿದ್ಯಾಭ್ಯಾಸದ ಕುರಿತು ಚರ್ಚಿಸಿ, ಸಲಹೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮುಖಂಡರು ಇತರರು ಉಪಸ್ಥಿತರಿದ್ದರು.