ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಮುಂಬೈ ಡಾನ್ ಕರೀಮ್ ಲಾಲ್ರನ್ನು ಭೇಟಿ ಮಾಡಿದ್ದರು ಎಂದು ಸ್ಥಳೀಯ ಮರಾಠಿ ಮಾಧ್ಯಮ ಸಂದರ್ಶನದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ ನೀಡಿರುವ ಹೇಳಿಕೆ ಇದೀಗ ಭಾರಿ ವಿವಾದ ಸೃಷ್ಟಿಸಿದೆ.
ಶಿವಸೇನಾ ನೇತೃತ್ವದ ಮಹಾ ವಿಕಾಸ್ ಅಘಾಡಿಯ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ವಿರುದ್ಧವೇ ಈ ರೀತಿಯ ಹೇಳಿಕೆ ನೀಡಿರುವುದು ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಈ ಹಿಂದೆ ಮುಂಬೈ ಮೇಲಿದ್ದ ಅಂಡರ್ವರ್ಲ್ಡ್ ಪ್ರಭಾವ ಕುರಿತು ಮಾತನಾಡುವಾಗ ಸಂಜಯ್ ಈ ಹೇಳಿಕೆ ನೀಡಿದ್ದಾರೆ. ಮುಂಬೈ ನಗರ ಆಯುಕ್ತ ಯಾರಾಗಬೇಕು? ಮತ್ತು ರಾಜ್ಯ ಸಚಿವಾಲಯ ಯಾರಾಗಬೇಕೆಂದು ಅಂಡರ್ವರ್ಲ್ಡ್ ನಿರ್ಧಾರ ಮಾಡುತ್ತಿತ್ತು. ಇಡೀ ಸಚಿವಾಲಯವೇ ಡಾನ್ ಹಾಜಿ ಮಸ್ತಾನ್ ನಗರದಲ್ಲಿದ್ದಾಗ ಭೇಟಿಯಾಗುತ್ತಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದಕ್ಷಿಣ ಮುಂಬೈನಲ್ಲಿ ಡಾನ್ ಕರೀಮ್ ಲಾಲ್ರನ್ನು ಭೇಟಿಯಾಗಿದ್ದರು ಎಂಬ ಆತಂಕಕಾರಿ ಮಾಹಿತಿಗಳನ್ನು ಸಂಜಯ್ ರಾವತ್ ಬಿಚ್ಚಿಟ್ಟಿದ್ದಾರೆ. ಆದರೆ, ಈವರೆಗೂ ಕಾಂಗ್ರೆಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮುಂಬೈ ಅಂಡರ್ವರ್ಲ್ಡ್ನ ಪ್ರಮುಖ ಮೂರು ಡಾನ್ಗಳಲ್ಲಿ ಒಬ್ಬನಾಗಿದ್ದ ಕರೀಮ್ ಲಾಲ್, ಎರಡು ದಶಕಗಳವರೆಗೆ ತನ್ನ ಭೂಗತ ಚಟುವಟಿಕೆಗಳನ್ನು ನಡೆಸಿದ್ದ. 1960 ಮತ್ತು 80 ಸಮಯದಲ್ಲಿ ಇನ್ನಿಬ್ಬರು ಡಾನ್ಗಳಾದ ಮಸ್ತಾನ್ ಮಿಜ್ರಾ ಅಲಿಯಾಸ್ ಹಾಜಿ ಮಸ್ತಾನ್ ಮತ್ತು ವರದರಾಜನ್ ಮೂದಲಿಯಾರ್ ಡಾನ್ಗಳಾಗಿದ್ದರು. ಭೂಗತ ದೊರೆ ದಾವೂದ್ ಇಬ್ರಾಹಿಂ ಸೇರಿದಂತೆ ಅನೇಕ ಗ್ಯಾಂಗ್ಸ್ಟರ್ ಫೋಟೋಗಳನ್ನು ತೆಗೆದಿರುವುದಾಗಿ ಸಂಜಯ್ ರಾವತ್ ತಿಳಿಸಿದ್ದಾರೆ. ಆಕಸ್ಮಿಕವೆಂಬಂತೆ 1960ರಲ್ಲಿ ಸ್ಥಾಪನೆಯಾದ ಶಿವಸೇನಾ 1985ರಿಂದ ಅಧಿಕಾರವನ್ನು ಅನುಭವಿಸುತ್ತಾ ಬಂದಿದೆ.
ಸಂಪುಟ ವಿಸ್ತರಣೆ ಬೆನ್ನಲ್ಲೇ ಹೇಳಿಕೆ
ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಂಜಯ್ ರಾವತ್ ಈ ಹೇಳಿಕೆ ನೀಡಿದ್ದಾರೆ. ಅಂದಹಾಗೆ ಸಂಜಯ್ಗೆ ಸಂಪುಟ ವಿಸ್ತರಣೆ ಬಗ್ಗೆ ಅಸಮಧಾನವಿದೆಯಂತೆ. ಸಂಪುಟದಲ್ಲಿ ಸಂಜಯ್ ಸಹೋದರ ಸನಿಲ್ ರಾವತ್ಗೆ ಸ್ಥಾನ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)