ಯಾದಗಿರಿ: ಗುರುಮಠಕಲ್ ತಾಲೂಕಿನ ಚಿಂತನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ಭಾನುವಾರ ಶಾಸಕ ನಾಗನಗೌಡ ಕಂದಕೂರ ಗ್ರಾಮಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಜನರ ಆರೋಗ್ಯದ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ. ನೀರಿನ ಟ್ಯಾಂಕ್ ಸೇರಿ ಊರಲ್ಲಿ ಸ್ವಚ್ಛತೆ ಕಾಪಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಳವೆ ಬಾವಿ ನೀರಿನಿಂದಲೇ ಅಸ್ವಸ್ಥರಾಗಿದ್ದು, ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ನಾಗನಗೌಡ ತಿಳಿಸಿದರು.
ಚಿಂತನಹಳ್ಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸುವಂತೆ ತಾಕೀತು ಮಾಡಲಾಗಿದೆ. ಇನ್ನು ಗ್ರಾಮಕ್ಕೆ ಸಂಪರ್ಕಿಸುವ ಎಲ್ಲ ನೀರಿನ ಪೈಪ್ಲೈನ್ಗಳ ದುರಸ್ತಿ ಮಾಡಬೇಕು. ಸ್ಥಳದಲ್ಲಿ ಆರೋಗ್ಯ, ಕಂದಾಯ ಮತ್ತು ಗ್ರಾಪಂ ಅಧಿಕಾರಿಗಳು ಕಡ್ಡಾಯವಾಗಿ ಇರುವಂತೆ ತಿಳಿಸಲಾಗಿದೆ ಎಂದರು.
ತಹಸೀಲ್ದಾರ್ ಸಂಗಮೇಶ ಜಿಡಗೆ, ತಾಲೂಕು ವೈದ್ಯಾಧಿಕಾರಿ ಹಣಮರೆಡ್ಡಿ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಸಂತೋಷರೆಡ್ಡಿ, ಪಿಡಿಒ ಮಹ್ಮದ್ ಅಲಿ, ವಿದ್ಯಾಸಾಗರ, ಬಸವರಾಜ, ಪಿಎಸ್ಐ ಶೀಲಾದೇವಿ ನ್ಯಾಮನ್ ಇದ್ದರು