ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಬಗ್ಗೆ ಇಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಾಗೇ ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಜಿ.ಪರಮೇಶ್ವರ್ ಅವರು, ಕೆಜಿ ಹಳ್ಳಿ ಮತ್ತು ಡಿಜೆಹಳ್ಳಿ ಘಟನೆಗೆ ನವೀನ್ ಎಂಬುವನು ಮಹಮ್ಮದ್ ಪೈಗಂಬರ್ ವಿರುದ್ಧ ಹಾಕಿದ್ದ ಅವಹೇಳನಕಾರಿ ಪೋಸ್ಟ್ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಸಂಪೂರ್ಣ ಸುಟ್ಟುಹೋಗಿದೆ. ಅವರ ಅಕ್ಕ, ಸಹೋದರ ಮನೆಗೂ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಠಾಣೆಯನ್ನೂ ಧ್ವಂಸ ಮಾಡಿದ್ದಾರೆ. ಪೊಲೀಸ್ ವಾಹನಗಳು ಸೇರಿ ಅನೇಕ ವಾಹನಗಳು ನಾಶವಾಗಿವೆ. ಇದೆಲ್ಲ ವಹಿಸಿಕೊಂಡು ಬರುವ ವಿಚಾರ ಅಲ್ಲ ಎಂದು ಹೇಳಿದರು.
ನಮ್ಮ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರಿಗೆ ಆಗಿರುವ ನೋವು, ನಷ್ಟದಲ್ಲಿ ಅವರ ಜತೆ ಇಡೀ ಕಾಂಗ್ರೆಸ್ ಪಕ್ಷ ಇದೆ. ನಾವೆಲ್ಲರೂ ಒಟ್ಟಾಗಿ ಅವರಿಗೆ ನ್ಯಾಯ ದೊರಕಿಸಿಕೊಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ‘ಲವ್ ಮಾಕ್ಟೇಲ್ 2’ ಫಸ್ಟ್ಲುಕ್ ರಿಲೀಸ್; ಗಡ್ಡಧಾರಿ ಅವತಾರದಲ್ಲಿ ಕೃಷ್ಣ
ಘಟನೆ ನಡೆದ ಮಾರನೇದಿನವೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ನೋಡಿದ್ದಾರೆ. ಯಾರು ಈ ಕೃತ್ಯ ಮಾಡಿದ್ದಾರೋ, ಅವರನ್ನು ಕಂಡುಹಿಡಿದು, ಘಟನೆಯ ಬಗ್ಗೆ ಸಂಪೂರ್ಣ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೇ ಡಿಜೆಹಳ್ಳಿ, ಕೆಜಿ ಹಳ್ಳಿ ಗಲಾಟೆಯ ಸತ್ಯಾಸತ್ಯತೆ ತಿಳಿಯಲು ಕಾಂಗ್ರೆಸ್ನಲ್ಲಿ ನನ್ನ ನೇತೃತ್ವದಲ್ಲಿ ಸತ್ಯ ಶೋಧನಾ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕೃಷ್ಣ ಭೈರೇಗೌಡರು, ರಾಮಲಿಂಗಾರೆಡ್ಡಿ, ಹರಿಪ್ರಸಾದ್, ಜಾರ್ಜ್ ಅವರು ಸಮಿತಿಯಲ್ಲಿದ್ದಾರೆ. ನಾವೂ ಈಗಾಗಲೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ. ಪೊಲೀಸರಿಂದಲೂ ಮಾಹಿತಿ ಕಲೆ ಹಾಕಿದ್ದೇವೆ. ಇದೆಲ್ಲದರ ಸಮಗ್ರ ವರದಿಯನ್ನೂ ನಂತರ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಕಿಡಿ
ಹಾಗೇ, ಪರಮೇಶ್ವರ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಘಟನೆ ಯಾಕೆ ಆಯಿತು? ಕಾರಣವೇನು? ನಿಜವಾದ ತಪ್ಪಿತಸ್ಥರು ಯಾರು ಎಂಬುದನ್ನು ತನಿಖೆಗೆ ಒಳಪಡಿಸಿ. ಅದನ್ನು ಬಿಟ್ಟು ಕಾಂಗ್ರೆಸ್ ಮೇಲೆ ಯಾಕೆ ಆರೋಪ ಹೊರಿಸುತ್ತೀರಿ ಎಂದು ಪ್ರಶ್ನಿಸಿದರು.
ಘಟನೆಗೆ ಕಾಂಗ್ರೆಸ್ ಕಾರಣ ಎಂಬಂತೆ ಕೆಲವು ಸಚಿವರು ನಮ್ಮ ಮೇಲೆ ಆರೋಪ ಮಾಡಿದ್ದಾರೆ. ನಾವು ನಮ್ಮ ಶಾಸಕರ ಮನೆಗೆ ಬೆಂಕಿ ಹಚ್ಚುತ್ತೇವೆ. ಬಿಜೆಪ ಸಂಸ್ಕೃತಿ ಇದೇನಾ? ಕಾಂಗ್ರೆಸ್ ಗಲಭೆ ಮಾಡಿಸಿದೆ ಎನ್ನಲು ನಿಮಗೆ ಯಾವುದಾದರೂ ಸ್ಪಷ್ಟ ಮಾಹಿತಿ ಸಿಕ್ಕಿದೆಯಾ? ಸುಮ್ಮನೆ ಯಾಕೆ ಆರೋಪ ಮಾಡುತ್ತೀರಿ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ತಪ್ಪಿತಸ್ಥರನ್ನು ಕಂಡು ಹಿಡಿದು ಶಿಕ್ಷೆ ನೀಡಲಿ. ಅದು ಬಿಟ್ಟ ಅಲ್ಲಿ ಅನೇಕರು ಸಂಬಂಧವೇ ಇಲ್ಲದವರನ್ನೆಲ್ಲ ಪೊಲೀಸರು ಬಂಧಿಸಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಸ್ವಾತಂತ್ರ್ಯೋತ್ಸವದಂದೇ ಪ್ರಧಾನಿ ಮೋದಿಯವರಿಗೆ ಕರೆ ಮಾಡಿದ್ದೇಕೆ ನೇಪಾಳ ಪ್ರಧಾನಿ !