ಬೆಂಗಳೂರು: ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು ಎಂದು ರಾಜ್ಯ ಕಾಂಗ್ರೆಸ್ ಮಾಜಿ ಸಿಎಂಗೆ ಎಚ್ಚರಿಕೆ ನೀಡಿದೆ.
ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ರಾಜ್ಯ ಕಾಂಗ್ರೆಸ್ ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ತೆಲಂಗಾಣ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ IT ದಾಳಿ
ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿ ಪಕ್ಷಕ್ಕೆ ಸೆಳೆಯುವಾಗ ಜಾಮೂನು ಕೊಡ್ತಾರೆ, ನಂತರ ವಿಷ ಕೊಡುತ್ತಾರೆ. ಇದನ್ನು ಬಿಜೆಪಿಯವರೇ ಹೇಳಿದ್ದು. ಈಗ ಬಿಜೆಪಿಯ ಜಾಮೂನು ತಿನ್ನುತ್ತಿರುವ ಕುಮಾರಸ್ವಾಮಿಯವರು ಮುಂದೆ ವಿಷ ತಿನ್ನಲು ತಯಾರಿರುವುದು ಒಳ್ಳೆಯದು. ಬಿಜೆಪಿಯವರು ಜಾಮೂನಿನ ಒಳಗೆ ವಿಷ ಬೆರೆಸಿರುತ್ತಾರೆ ಸತ್ಯ ವಲಸಿಗರಿಗೆ ಅರಿವಾಗಿದೆ, ಮುಂದೆ ಕುಮಾರಸ್ವಾಮಿಯವರಿಗೂ ಅರಿವಾಗಲಿದೆ. ಅರಿವಾಗುವುದರೊಳಗೆ ಜೆಡಿಎಸ್ ಪ್ರಾಣ ಹೋಗಿರುತ್ತದೆ.
ಜೆಡಿಎಎಸ್-ಬಿಜೆಪಿ ಮೈತ್ರಿ ಒಲ್ಲದ ಸಂಸಾರ ಒತ್ತಾಯದ ಬಾಳ್ವೆಯಂತಾಗಿದೆ. ಜೆಡಿಎಸ್ ಶಾಸಕರು ಬಿಜೆಪಿಯೊಂದಿಗಿನ ಮೈತ್ರಿ ಆತ್ಮಹತ್ಯೆಗೆ ಸಮ ಎಂದು ತಿಳಿದಿದ್ದಾರೆ, ಇತ್ತ ಬಿಜೆಪಿ ನಾಯಕರು ಕುಮಾರಸ್ವಾಮಿ ನಮ್ಮ ಜಾಗವನ್ನು ಅತಿಕ್ರಮಿಸಿಸುತ್ತಿದ್ದಾರೆ ಎಂದು ಒಳಗೊಳಗೇ ಕೈ ಹಿಸುಕುತ್ತಿದ್ದಾರೆ. ಶರಣಗೌಡ ಕಂದನೂರು ಹಾಗೂ ಸದಾನಂದಗೌಡರ ಮಾತುಗಳಲ್ಲೇ ಈ ಸಂಗತಿ ಬೆಳಕಿಗೆ ಬಂದಿದೆ. ಒಟ್ಟಿನಲ್ಲಿ ಮೈತ್ರಿಗೆ ಖಾತ್ರಿ ಇಲ್ಲದೆ ಕತ್ತರಿ ಬೀಳುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದೆ.