ಚಿಕ್ಕಮಗಳೂರು: ಆವನತಿಯತ್ತ ಸಾಗುತ್ತಿರುವ ಕಾಂಗ್ರೆಸ್ನ ಶವ ಪೆಟ್ಟಿಗೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೊನೆಯ ಮೊಳೆ ಹೊಡೆಯುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಸಂಸದರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದ್ದಿಯಾಗಲು ರಾಹುಲ್ ಗಾಂಧಿ ‘ದಂಡಾ ಮಾರಾ’ದಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಳ್ಳಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇಶ ಭದ್ರತಾ ವಿರೋಧಿ ಹೇಳಿಕೆಗಳನ್ನೂ ನೀಡುತ್ತಿದ್ದಾರೆ. ದೇಶ ಇಬ್ಬರನ್ನು ಮರೆಯುತ್ತಿದೆ. ಮಾಧ್ಯಮಗಳಿಗೂ ಈ ಇಬ್ಬರು ಪ್ರಮುಖ ವ್ಯಕ್ತಿಗಳು ಅನ್ನಿಸುತ್ತಿಲ್ಲ ಎಂದು ಟೀಕಿಸಿದರು.
ರಾಹುಲ್ ಅಕ್ರಮ ನಿವಾಸಿಗಳು, ನುಸುಳುಕೋರರಿಗೆ ದಂಡಾ ಮಾರಾ ಎಂಬ ಹೇಳಿಕೆ ನೀಡಬೇಕು. ಇಂಥ ಹೇಳಿಕೆಯಿಂದ ಕಾಂಗ್ರೆಸ್ನ ಮಾನಸಿಕತೆ ಅನಾವರಣವಾಗುತ್ತದೆ. ಇದು ಕಾಂಗ್ರೆಸ್ನ ಅವನತಿಯ ಸೂಚನೆ ಎಂದು ವಿಶ್ಲೇಷಿಸಿದರು.
ಹೊಸದಿಲ್ಲಿಯ ಶಾಹೀನ್ ಬಾಗ್ನಲ್ಲಿ ಆಪ್ ಷಡ್ಯಂತ್ರ ನಡೆಸುತ್ತಿದೆ. ಅಲ್ಲಿ ಗುಂಡು ಹಾರಿಸಿದವನು ಆಪ್ ಕಾರ್ಯಕರ್ತ. ದಿಲ್ಲಿಯಲ್ಲಿ ಅಶಾಂತಿ ಮೂಡಿಸಲು ಆಪ್, ಕಾಂಗ್ರೆಸ್ ಹುನ್ನಾರ ನಡೆಸಿವೆ. ಆ ಮೂಲಕ ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರಾಜಕೀಯ ಮಾಡುತ್ತಿವೆ. ಅಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಯುತ್ತಿಲ್ಲ. ದೇಶದ್ರೋಹದ ಚಟುವಟಿಕೆ ಮಾಡಲಾಗುತ್ತಿದೆ. ಹೊರಗಿನವರನ್ನು ಒಳಬಿಡದೆ ದೌರ್ಜನ್ಯ ಮಾಡಲಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ತಡೆಯಲಿದೆ ಎಂದು ಹೇಳಿದರು.
ಕರೊನಾ ನಿಯಂತ್ರಣಕ್ಕೆ ಕ್ರಮ: ಕರೊನಾ ವೈರಸ್ ನಿಯಂತ್ರಣಕ್ಕೆ ಭಾರತ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹರಿಯಾಣ ಸಮೀಪ ವಿಶೇಷ ಆಸ್ಪತ್ರೆ ತೆರೆಯಲಾಗಿದೆ. ಸಹಾಯಕ್ಕೆ ಮಿಲಿಟರಿಯೂ ಸನ್ನದ್ಧಗೊಂಡಿದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ವೈದ್ಯಕೀಯ ಉಪಕರಣ, ಮಾತ್ರೆಗಳನ್ನು ಸದ್ಯ ನಿಲ್ಲಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕೇರಳದಿಂದ ಚಿಕ್ಕಮಗಳೂರಿಗೆ ಬರುವ ಪ್ರವಾಸಿಗರ ಮೇಲೆ ನಿಗಾವಹಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗುವುದು. ಇಷ್ಟೊಂದು ಪ್ರಮಾಣದಲ್ಲಿ ಜಿಲ್ಲೆಗೆ ಬರುವ ವಿದ್ಯಾರ್ಥಿಗಳ ಚಟುವಟಿಕೆ ಬಗ್ಗೆ ಅನುಮಾನವಿದೆ. ರೆಸಾರ್ಟ್, ಹೋಂ ಸ್ಟೇಗಳಲ್ಲಿ ಉಳಿದುಕೊಳ್ಳುವ ಇವರು ಏನು ಮಾಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.