ಬೆಂಗಳೂರು: ಉದ್ಘಾಟನೆಗೊಂಡ ಮರುದಿನವೇ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ಕಿತ್ತು ಬಂದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದು, ರಸ್ತೆ ಕಿತ್ತು ಬಂದಿಲ್ಲ. Expansion joint ಬಳಿ ಕಂಡು ಬಂದಿದ್ದ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದಶಪಥ ಹೆದ್ದಾರೆ ದುರಸ್ತಿ ವಿಚಾರವಾಗಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ, ನೀವು ಯಾರ ಕಿವಿ ಮೇಲೆ ಹೂವು ಇಡುತ್ತೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದೆ. ಒಂದರಲ್ಲಿ ಹಳದಿ ಪಟ್ಟಿ, ಮತ್ತೊಂದರಲ್ಲಿ ಬಿಳಿ ಪಟ್ಟಿ ಇದ್ದು ಜನರ ದಿಕ್ಕು ತಪ್ಪಿಸುವುದಕ್ಕೂ ಮಿತಿ ಬೇಡವೇ? ನ್ಯೂನ್ಯತೆಗಳಿರುವ ರಸ್ತೆಯನ್ನು ಇಷ್ಟು ಬೇಗ ಉದ್ಘಾಟಿಸಿದ್ದೇಕೆ? ಇಂತಹ ಹಲವು ನ್ಯೂನ್ಯತೆಗಳಿಗೆ 80 ಅಪಘಾತಗಳಾದವೇ? ನ್ಯೂನ್ಯತೆಯ ರಸ್ತೆಗೆ ಜನ ಟೋಲ್ ನೀಡಬೇಕೆ? ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ರ್ಯಾಶ್ ಡ್ರೈವಿಂಗ್ ಪ್ರಶ್ನಿಸಿದ್ದೇ ತಪ್ಪಾಯ್ತು! ಸಿಟ್ಟಿನಲ್ಲಿ ಚಾಕುವಿನಿಂದ ಕುತ್ತಿಗೆಗೆ ಹಲ್ಲೆ
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಉದ್ಘಾಟನೆಗೊಳ್ಳುತ್ತಿದ್ದಂತೆ ಸಾಕಷ್ಟು ಆರೋಪ – ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಅದರಲ್ಲೂ ಟೋಲ್ ಸಂಗ್ರಹ ಆರಂಭವಾಗುತ್ತಿದ್ದಂತೆ ಟೀಕೆಗಳು ವ್ಯಕ್ತವಾಗಿದೆ. ಕಾಮಗಾರಿ ಸಂಪೂರ್ಣವಾಗದೆ ಟೋಲ್ ಸಂಗ್ರಹ ಮಾಡಬಾರದೆಂದು ನಿನ್ನೆ ಕೆಲ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಟೋಲ್ ಸಂಗ್ರಹ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದು, ಪ್ರಧಾನಿ ಮೋದಿ ಬಂದು ಉದ್ಘಾಟನೆ ಮಾಡಿದ್ದೇ ತಪ್ಪು. ರಸ್ತೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ನಿರ್ಮಾಣ ಮಾಡಬೇಕು. ಕಂಟ್ರಾಕ್ಟರ್ ಸರಿಯಾಗಿ ಕೆಲಸ ಮಾಡಿಲ್ಲ. ಸ್ಥಳೀಯ ಜನರಿಗೆ ಸಹಾಯವಾಗುವಂತೆ ಸಮರ್ಪಕವಾದ ಸರ್ವೀಸ್ ರಸ್ತೆ ಮಾಡಬೇಕು. ಚುನಾವಣೆ ಕಾರಣಕ್ಕೆ ರಸ್ತೆಯನ್ನು ಬೇಗನೆ ಉದ್ಘಾಟನೆ ಮಾಡಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು – ಪೊಲೀಸರ ಮಧ್ಯೆ ವಾಗ್ವಾದ; ಪಿಎಸ್ಐ ಕಾಲರ್ ಎಳೆದು ಹಲ್ಲೆ ಮಾಡಿದ ಶಾಸಕರ ಪುತ್ರ
ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ಕಾಮಗಾರಿಗೆ ಸಂಬಂಧಿಸಿ ಸಂಸದ ಪ್ರತಾಪಸಿಂಹ ಅವರು ಕೋಟ್ಯಂತರ ರೂಪಾಯಿ ಕಮಿಷನ್ ಪಡೆದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಆರೋಪಿಸಿದ್ದರು. ಹೆದ್ದಾರಿ ವಿಚಾರವಾಗಿ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮಾರ್ಚ್ 17 ರಂದು ಸಾಂಕೇತಿಕವಾಗಿ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಸರ್ಕಲ್ ಬಳಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.