ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪ ಅವರ ಮಾತಿನಿಂದ ಉಂಟಾದ ಗದ್ದಲ ಇದೀಗ ಅಹೋರಾತ್ರಿ ಧರಣಿಯವರೆಗೂ ಮುಂದುವರಿದಿದ್ದು, ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲೇ ಮಲಗಲು ಸಜ್ಜಾಗಿ ಬಂದಿದ್ದಾರೆ.
ಧ್ವಜದ ವಿಚಾರವಾಗಿ ಈಶ್ವರಪ್ಪ ನೀಡಿದ್ದ ಹೇಳಿಕೆ ಸಂಬಂಧ ಹೊತ್ತಿಕೊಂಡ ಸಂಘರ್ಷ ರಾಜೀನಾಮೆಗೆ ಪಟ್ಟು ಹಿಡಿಯುವವಲ್ಲಿಗೆ ತಲುಪಿದ್ದು, ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ನವರು ಅಹೋರಾತ್ರಿ ಧರಣಿಗೆ ಸಜ್ಜಾಗಿದ್ದಾರೆ.
ಕಾಂಗ್ರೆಸ್ ನಾಯಕರ ಅಹೋರಾತ್ರಿ ಧರಣಿ ಹಿನ್ನೆಲೆಯಲ್ಲಿ ಈಗಾಗಲೇ ಅವರಿಗೆಲ್ಲ ಸ್ಪೀಕರ್ ಸೂಚನೆಯಂತೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದ್ದು, 120 ಜನರಿಗೆ ಖಾಸಗಿ ಹೋಟೆಲೊಂದರಿಂದ ಭೂರಿಭೋಜನವೇ ಬಂದಿದೆ.
ಕೆಲವು ನಾಯಕರು ಟ್ರ್ಯಾಕ್ಪ್ಯಾಂಟ್ ಮುಂತಾದ ರಾತ್ರಿ ಉಡುಪಿನೊಂದಿಗೆ ತಯಾರಾಗಿ ಬಂದಿದ್ದಾರೆ. ಟ್ರ್ಯಾಕ್ ಪ್ಯಾಂಟ್, ಟೀಶರ್ಟ್ ಧರಿಸಿ, ಹೆಗಲ ಮೇಲೆ ಸಫಾರಿ ಟವಲ್ ಹಾಕಿಕೊಂಡು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಈಗಾಗಲೇ ಹಾಜರಾಗಿದ್ದಾರೆ. ಅವರು ಉಳಿದ ಶಾಸಕರಿಗೆಲ್ಲ ಮಲಗಲು ವ್ಯವಸ್ಥೆ ಮಾಡುತ್ತಿದ್ದಾರೆ. ಅಲ್ಲಿ ಶಾಸಕರಿಗೆ ಮಲಗಲು ಹಾಸಿಗೆ-ದಿಂಬು ಜೋಡಿಸಿಡಲಾಗುತ್ತಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಎಲ್ಲ ನಾಯಕರೂ ಸೇರಿಕೊಳ್ಳಲಿದ್ದಾರೆ.
ಹೆರಿಗೆ ಮಾಡಿಸಲಿಕ್ಕೂ ಲಂಚ ಕೇಳಿದ ವೈದ್ಯ; ದಾಳಿ ವೇಳೆ ಮನೆಯಲ್ಲಿತ್ತು ಕೋಟಿಗೂ ಅಧಿಕ ಹಣ!