ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ, ನಾಗರಿಕರ ನೋಂದಣಿ ಹಾಗೂ ಆರ್ಥಿಕ ಕುಸಿತ ವಿಷಯಗಳ ಮೇಲೆ ಆಡಳಿತರೂಢ ಬಿಜೆಪಿ ವಿರುದ್ಧ ಬೃಹತ್ ಹೋರಾಟ ರೂಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕರೆದಿದ್ದ ವಿಪಕ್ಷಗಳ ಸಭೆಗೆ ಹಲವು ಪಕ್ಷಗಳ ನಾಯಕರು ಗೈರಾಗಿದ್ದರು.
ಬಿಜೆಪಿ ವಿರುದ್ಧ ಹೋರಾಟ ರೂಪಿಸಲು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಸೋಮವಾರ ಸಭೆ ನಡೆಸಲಾಯಿತು. ಮೊದಲ ಸಭೆಗೆ ಹಲವು ಮಂದಿ ನಾಯಕರು ಗೈರಾದ ಪರಿಣಾಮ ಹೋರಾಟಕ್ಕೆ ಹಿನ್ನಡೆಯಾಗಿದೆ.
ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ನಾಯಕ ಸ್ಟ್ಯಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಭೆಯಿಂದ ದೂರ ಉಳಿದವರು.
ಸಭೆಗೆ ಹಾಜರಾಗುವುದಾಗಿ ತಿಳಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೊನೆ ಗಳಿಗೆಯಲ್ಲಿ ಸಭೆಗೆ ಬಾರದಿರಲು ನಿರ್ಧರಿಸಿದರು. ಡಿಎಂಕೆ ನಾಯಕ ಸ್ಟ್ಯಾಲಿನ್ ಸಭೆ ಆಗಮಿಸುತ್ತಾರೆ ಎಂದು ನಿರೀಕ್ಷಿಸಿದ್ದರೂ ಕೊನೆಗೆ ಅವರೂ ಗೈರು ಹಾಜರಾಗಿದ್ದು ಎಲ್ಲರಲ್ಲೂ ನಿರಾಸೆ ಮೂಡಿಸಿತು.
ಕಾಂಗ್ರೆಸ್ನ ಹೊಸ ಮೈತ್ರಿದಾರ ಶಿವಸೇನೆ ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)