ಬೆಂಗಳೂರು: ಕಾಂಗ್ರೆಸ್ ನಾಯಕ ಯು.ಟಿ. ಖಾದರ್ ಅವರು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ಸಂವಿಧಾನ ಬದ್ಧವಾದ, ಗೌರವದ ಹುದ್ದೆ. ನಾಮಪತ್ರ ಸಲ್ಲಿಸುವಂತೆ ಹೈಕಮಾಂಡ್ ಸೂಚಿಸಿದ್ದು, ಒಪ್ಪಿದ್ದೇನೆ. ಸಚಿವ ಸ್ಥಾನ ಎಲ್ಲರಿಗೂ ಸಿಗುತ್ತದೆ. ಆದರೆ ಸ್ಪೀಕರ್ ಅಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದರು.
ಜನರ ಆಶೀರ್ವಾದ ನನ್ನ ಮೇಲಿದೆ!
ಈ ಹಿಂದೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಇಂದು ಸ್ಪೀಕರ್ ಆಗುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಸ್ಪೀಕರ್ ಜವಾಬ್ದಾರಿ ವಹಿಸಿ ಪಾರದರ್ಶಕವಾಗಿ ಸದನ ನಡೆಸಿಕೊಂಡು ಹೋಗುತ್ತೇನೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಮುಂತಾದವರು ಚರ್ಚೆ ಮಾಡಿ ಒಮ್ಮತದಿಂದ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಸ್ಪೀಕರ್ ಆದವರು ಚುನಾವಣೆಯಲ್ಲಿ ಸೋಲುತ್ತಾರೆ ಎನ್ನುವ ಮೂಢನಂಬಿಕೆಯನ್ನು ನಂಬುವುದಿಲ್ಲ. ಜನರ, ಪಕ್ಷದ, ಕ್ಷೇತ್ರದ ಆಶೀರ್ವಾದ ನನ್ನ ಮೇಲಿದೆ ಎಂದು ಯು.ಟಿ.ಖಾದರ್ ಹೇಳಿದರು.
ಇದನ್ನೂ ಓದಿ: VIDEO | ಚಾಲಕರ ಕಷ್ಟ-ಸುಖ ಆಲಿಸಲು ಲಾರಿ ಏರಿದ ರಾಹುಲ್ ಗಾಂಧಿ!
ಯು.ಟಿ.ಖಾದರ್ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಪಕ್ಷ ಅವರನ್ನು ಆಯ್ಕೆ ಮಾಡಿದೆ. ಹೈಕಮಾಂಡ್ ಜತೆ ಚರ್ಚೆ ಮಾಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ನಾಯಕರಾದ ಶ್ರೀ ಯು.ಟಿ. ಖಾದರ್ ಅವರು ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಜೊತೆಗಿದ್ದು ಅವರಿಗೆ ಶುಭ ಹಾರೈಸಿದೆ. pic.twitter.com/DHR1Wyveuh
— DK Shivakumar (@DKShivakumar) May 23, 2023
ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ಅವರನ್ನು ಆಯ್ಕೆ ಮಾಡಿರುವುದು ಪಕ್ಷದ ತೀರ್ಮಾನ. ಹೊಸ ಮುಖ, ಯುವಕರಿಗೆ ಜವಾಬ್ದಾರಿ ಕೊಡಬೇಕು ಎಂದು ತೀರ್ಮಾನ ಆಗಿದೆ. ಐದು ಬಾರಿ ಖಾದರ್ ಶಾಸಕರಾಗಿದ್ದು, ಎಲ್ಲದರ ಬಗ್ಗೆ ತಿಳಿದುಕೊಂಡಿದ್ದಾರೆ. ಹೀಗಾಗಿ ಸ್ಪೀಕರ್ ಸ್ಥಾನಕ್ಕೆ ಅವರು ಸೂಕ್ತ ಎಂದು ನಿರ್ಧರಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.