ಲಖನೌ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಚುನಾವಣೆ ಸಮಯದಲ್ಲಿ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಸಹಜ. ಅದೇ ರೀತಿ ಇದೀಗ ಕಾಂಗ್ರೆಸ್ ಪಕ್ಷ ಹಿರಿಯ ನಾಯಕರ ಸೊಸೆಯೊಬ್ಬರು ಮಾತನಾಡುವ ವೇಳೆ ಜಿಹಾದ್ಗಾಗಿ ಮತ ನೀಡಿ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಉತ್ತರಪ್ರದೇಶದ ಫರೂಕಾಬಾದ್ನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಸೊಸೆ ಮರಿಯಾ ಆಲಂ ಖಾನ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸುವ ವೇಳೆ ಜಿಹಾದ್ಗಾಗಿ ಮತ ನೀಡುವಂತೆ ಕರೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೇಳಿಕೆ ಸಂಬಂಧ FIR ದಾಖಲಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ನಾವಲ್ ಕಿಶೋರ್ ಸಾಕ್ಯ ಪರ ಮತಯಾಚನೆ ಮಾಡುತ್ತಿರುತ್ತಾರೆ. ಈ ವೇಳೆ ಮಾತನಾಡುವ ಮರಿಯಾ ಆಲಂ ಖಾನ್, ಬಿಜೆಪಿ ಸರ್ಕಾರದ ಆಡಳಿತದಿಂದ ಅಲ್ಪ ಸಂಖ್ಯಾತರಿಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಜಿಹಾದ್ನ ಅವಶ್ಯಕತೆ ಇದೆ. ಹೀಗಾಗಿ ನಾವೆಲ್ಲಾ ಒಗ್ಗಟ್ಟಾಗಿ ಜಿಹಾದ್ಗಾಗಿ ಯಾವುದೇ ಆಮಿಷ ಹಾಗೂ ಭಾವನೆಗಳಿಗೆ ಬಲಿಯಾಗದೆ ಮತ ನೀಡೋಣ.
ಇದನ್ನೂ ಓದಿ: ಶಾರುಖ್ಗೆ ವಿರಾಟ್ ಕೊಹ್ಲಿ ಎಂದರೆ ಅಚ್ಚುಮೆಚ್ಚು; ಅನುಷ್ಕಾ ಪತಿಯನ್ನು ಕಿಂಗ್ ಖಾನ್ ಅಳಿಯ ಎಂದು ಕರೆಯುವುದೇಕೆ ಗೊತ್ತಾ?
ಪ್ರಸ್ತುತ ದೇಶದಲ್ಲಿ ಆಡಳಿತ ನಡೆಸುತ್ತಿರುವ ಸಂಘಿ ಸರ್ಕಾರವನ್ನು ಕೆಳಗಿಳಿಸಲು ಜಿಹಾದ್ನಿಂದ ಮಾತ್ರ ಸಾಧ್ಯ. ಇಲ್ಲವಾದಲ್ಲಿ ಈ ಸಂಘಿ ಸರ್ಕಾರ ನಮ್ಮ ಅಸ್ತಿತ್ವವನ್ನೇ ನಾಶ ಮಾಡುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಮಾತ್ರವಲ್ಲ ಮಾನವೀಯತೆ ಕೂಡ ಅಪಾಯದಲ್ಲಿದೆ. ನೀವು ನಮ್ಮ ಈ ದೇಶದ ಸಂಸ್ಕೃತಿ, ಪರಂಪರೆ ಮತ್ತು ಸೌಂದರ್ಯ ಉಳಿಯಬೇಕೆಂದು ಬಯಸುವುದಾದರೆ ಬುದ್ದಿವಂತಿಕೆಯಿಂದ ಮತ ಚಲಾಯಿಸಿ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಸೊಸೆ ಮರಿಯಾ ಆಲಂ ಖಾನ್ ಕರೆ ನೀಡಿದ್ದಾರೆ.
ಇನ್ನು ಮರಿಯಾ ನೀಡಿರುವ ಈ ಹೇಳಿಕೆ ಎಲ್ಲೆಡೆ ಭಾರೀ ವೈರಲ್ ಆಗುತ್ತಿದ್ದು, ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮರಿಯಾ ವಿರುದ್ಧ ದೂರು ದಾಖಲಾಗಿದೆ. ಅಲ್ಲದೇ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇನ್ನು ಘಟನೆ ಬಗ್ಗೆ ಸಲ್ಮಾನ್ ಖುರ್ಷಿದ್ ಸ್ಪಷ್ಟನೆ ನೀಡಿದ್ದು, ಜಿಹಾದ್ ಅಂದರೆ ಪ್ರತಿಕೂಲ ಪರಿಸ್ಥಿತಿ ವಿರುದ್ಧ ಹೋರಾಡುವುದು. ಜನರ ಸಾಂವಿಧಾನಿಕ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಆಕೆ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.