ಬೆಂಗಳೂರು: ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರಮಡಾ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ಅವರನ್ನು ಒತ್ತೆಯಲ್ಲಿ ಇರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಬುಧವಾರ ಬೆಳಗ್ಗೆಯೇ ಆ ಹೋಟೆಲ್ ಎದುರು ಧರಣಿ ಆರಂಭಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಮತ್ತು ಇತರರು ಹೋಟೆಲ್ ಎದುರು ಇದ್ದು, ಒಳಗಿರುವ ಶಾಸಕರ ಭೇಟಿಗೆ ಪ್ರಯತ್ನಿಸುತ್ತಿದ್ದಾರೆ.
ಇದಕ್ಕೂ ಮುನ್ನ, ಬುಧವಾರ ಬೆಳ್ಳಂಬೆಳಗ್ಗೆಯೇ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ದಿಗ್ವಿಜಯ ಸಿಂಗ್ ಅವರನ್ನು ಡಿ.ಕೆ.ಶಿವಕುಮಾರ್ ಮತ್ತು ಇತರೆ ನಾಯಕರು ಬರಮಾಡಿಕೊಂಡರು. ನಂತರ ಎಲ್ಲರೂ ಒಟ್ಟಾಗಿ ರಮಡಾ ಹೋಟೆಲ್ ಗೆ ತೆರಳಿದ್ದು, ಅಲ್ಲಿದ್ದ ಪೊಲೀಸರು ಈ ನಾಯಕರನ್ನು ಹೋಟೆಲ್ ಪ್ರವೇಶಿಸದಂತೆ ತಡೆದರು. ಇದನ್ನು ವಿರೋಧಿಸಿ ಅಲ್ಲಿಯೇ ಕಾಂಗ್ರೆಸ್ ನಾಯಕರು ಧರಣಿ ಆರಂಭಿಸಿದರು.
ಈ ನಡುವೆ ದಿಗ್ವಿಜಯ ಸಿಂಗ್ ಅವರು ಸುದ್ದಿಗಾರರ ಜತೆ ಮಾತನಾಡಿ, ನಾನು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದೇನೆ. ಮಾರ್ಚ್ 26ರಂದು ಮತದಾನವಿದೆ. ನನ್ನ ಶಾಸಕರನ್ನು ಇಲ್ಲಿ ಕೂಡಿಹಾಕಲಾಗಿದೆ. ಅವರು ನನ್ನ ಜತೆ ಮಾತನಾಡಲು ಇಚ್ಛಿಸಿದ್ದಾರೆ. ಅವರ ಫೋನ್ಗಳನ್ನೂ ಕಸಿದುಕೊಳ್ಳಲಾಗಿದೆ. ಶಾಸಕರಿಗೆ ಬೆದರಿಕೆ ಇದೆ ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಕ್ಕೆ ಪೊಲೀಸರು ಬಿಡುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. (ಏಜೆನ್ಸೀಸ್)
ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ ಎಂದ ಮಧ್ಯಪ್ರದೇಶ ಕಾಂಗ್ರೆಸ್; ಬಿಜೆಪಿ ವಿರುದ್ಧ ಸುಪ್ರೀಂಕೋರ್ಟ್ಗೆ ಅರ್ಜಿ