ತುಮಕೂರು: ಕೊರಟಗೆರೆಯಲ್ಲಿ ನಿನ್ನೆ(ಬುಧವಾರ) ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ದುರಂತವೊಂದು ಸಂಭವಿಸಿದೆ. ವೇದಿಕೆಯಲ್ಲಿ ಭಾಷಣ ಮಾಡಿದ ಮರುಕ್ಷಣವೇ ಕಾರ್ಯಕರ್ತ ಪ್ರಾಣಬಿಟ್ಟಿದ್ದಾರೆ. ವೇದಿಕೆಯಲ್ಲೇ ಕುಸಿದುಬಿದ್ದ ಕಾರ್ಯಕರ್ತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ.
ಕ್ಯಾಷವಾರ ಗ್ರಾಮದ ಗ್ರಾಪಂ ಮಾಜಿ ಸದಸ್ಯ ನಾಗರಾಜಪ್ಪ (60)ಮೃತ. ಕೊರಟಗೆರೆ ಪಟ್ಟಣದ ಲಕ್ಷ್ಮೀನರಸಿಂಹ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಸಂಸ್ಥಾಪನಾ ದಿನ ಹಾಗೂ ಎಸ್ಟಿ-ಎಸ್ಸಿ ಸಮಾವೇಶದ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಮಾತು ಮುಗಿಸಿ ಕೆಳಗಿಳಿಯುವಾಗ ನಾಗರಾಜಪ್ಪ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟರಲ್ಲಿ ಪ್ರಾಣ ಹೋಗಿತ್ತು.
ಡಾ.ಜಿ.ಪರಮೇಶ್ವರ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಾವಿರಾರು ಕಾರ್ಯಕರ್ತರು ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಾಗರಾಜಪ್ಪಗೆ ಪತ್ನಿ, ಪುತ್ರಿ, ಪುತ್ರ ಇದ್ದಾರೆ.
ನಾಗರಾಜಪ್ಪ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ. ಸಾವಾಗುವ ಮುನ್ನ ನನ್ನ ಮತ್ತು ಪಕ್ಷದ ಸಂಘಟನೆ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿ ಮಾತನಾಡಿದ್ದರು. ವೇದಿಕೆಯಲ್ಲಿ ಮೃತಪಟ್ಟಿರುವುದು ತೀವ್ರ ನೋವು ತಂದಿದೆ.
| ಡಾ.ಜಿ.ಪರಮೇಶ್ವರ ಶಾಸಕ