ಬೆಂಗಳೂರು : ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ರೋಗಿಗಳು ಸಾವಪ್ಪಿರುವುದಕ್ಕೆ ಕಾಂಗ್ರೆಸ್ ಪಕ್ಷ, ಬಿಜೆಪಿ ಸರ್ಕಾರವೇ ಹೊಣೆ ಎಂದು ಟ್ವೀಟ್ ಮಾಡಿದೆ. “ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿತನ, ರಾಜ್ಯದ ಆರೋಗ್ಯ ಸಚಿವರ ನಿರ್ಲಕ್ಷ್ಯ, ಮುಖ್ಯಮಂತ್ರಿಗಳ ಕುರುಡುತನ, ಪ್ರಧಾನಿಯ ದುರಾಹಂಕಾರ ಈ ಮಾರಣಹೋಮಕ್ಕೆ ಕಾರಣ” ಎಂದಿದೆ.
“ಈ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತೀರಿ ? ಇದು ಸೋಂಕಿನಿಂದಾದ ಸಾವುಗಳಲ್ಲ, ಅವ್ಯವಸ್ಥೆಯ ಸರ್ಕಾರದಿಂದಾದ ಕೊಲೆ. ಸುಧಾಕರ್ ಅವರೇ, ಸಿಡಿಗೆ ತಡೆಯಾಜ್ಞೆ ತರುವಲ್ಲಿ ತಾವು ತೋರಿದ ತುರಾತುರಿಯನ್ನು ಆಕ್ಸಿಜನ್ ವಿಚಾರದಲ್ಲಿ ತೋರದಿದ್ದಿದ್ದು ಏಕೆ? ಈ ಸಾವುಗಳ ಹೊಣೆ ನಿಮ್ಮದಲ್ಲದೆ ಇನ್ಯಾರದ್ದು?” ಎಂದು ರಾಜ್ಯ ಕಾಂಗ್ರೆಸ್, ಆರೋಗ್ಯ ಸಚಿವ ಸುಧಾಕರ್ ಅವರ ಮೇಲೆ ಹರಿಹಾಯ್ದಿದೆ.
ಇದನ್ನೂ ಓದಿ: 10 ಗಂಟೆ ನಂತರ ಅರ್ಧ ಶಟರ್ ಮುಚ್ಚಿ ವ್ಯಾಪಾರ ! ಪೊಲೀಸರಿಂದ ಸೀಲ್ಡೌನ್
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ 70 ಟನ್ ಆಕ್ಸಿಜನ್ ಬೇಡಿಕೆ ಇದೆ. ಆದರೆ ಕೇವಲ 20 ಟನ್ ಪೂರೈಕೆಯಾಗುತ್ತಿದೆ. ಈ ಲೋಪಗಳಿದ್ದರೂ ಆರೋಗ್ಯ ಮಂತ್ರಿಗಳು ಗಮನ ಹರಿಸದೆ, ಸುಳ್ಳು ಹೇಳುತ್ತಲೇ 24 ಸಾವುಗಳಿಗೆ ಕಾರಣರಾಗಿದ್ದಾರೆ ಆರೋಪಿಸಿರುವ ಕಾಂಗ್ರೆಸ್ “ಯಡಿಯೂರಪ್ಪ ಅವರೇ, ಇಷ್ಟೆಲ್ಲ ವೈಫಲ್ಯವಿದ್ದರೂ ಸಚಿವರ ತಲೆದಂಡಕ್ಕೆ ಮಿನಾಮೇಷವೇಕೆ ?” ಎಂದು ಪ್ರಶ್ನಿಸಿದೆ.
“ತಜ್ಞರ ಅಭಿಪ್ರಾಯದ ಪ್ರಕಾರ ರಾಜ್ಯಕ್ಕೆ ಪ್ರತಿನಿತ್ಯ 1,500 ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ಒಕ್ಕೂಟ ಸರ್ಕಾರ ರಾಜ್ಯದ ಆಕ್ಸಿಜನ್ ಬಳಕೆಗೆ 802 ಟನ್ ಮಿತಿ ಹೇರಿದ್ದೇಕೆ ? ಹಿಂದೆಯೇ ಆಕ್ಸಿಜನ್ ಪ್ಲಾಂಟ್ಗಳಿಗೆ ಹಣ ಬಿಡುಗಡೆಯಾದರೂ ಆರೋಗ್ಯ ಸಚಿವ ಕಡತಗಳಿಗೆ ಸಹಿ ಹಾಕದೆ ಕುಳಿತಿದ್ದೇಕೆ ?” ಎಂದು ಸರಣಿ ಟ್ವೀಟ್ಗಳಲ್ಲಿ ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಆಸ್ಪತ್ರೆ ಒಳಗೂ ಹೆಣಗಳ ರಾಶಿ, ಹೊರಗೂ ಹೆಣ… ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸುತ್ತೆ ಚಾಮರಾಜನಗರದ ಘಟನೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, “ಅಪರಾಧಿಕ ನಿರ್ಲಕ್ಷ್ಯವು ಕರ್ನಾಟಕದಲ್ಲಿ 24 ಸಾವುಗಳಿಗೆ ಎಡೆಮಾಡಿಕೊಟ್ಟಿದೆ. ಸಿಎಂ ಯಡಿಯೂರಪ್ಪ ಮತ್ತು ಸಚಿವ ಸುಧಾಕರ್ ಅವರು ನಿತ್ಯ ಆಕ್ಸಿಜನ್ ಸಾಕಷ್ಟಿದೆ ಎಂದು ಏಕೆ ಸುಳ್ಳು ಹೇಳುತ್ತಿರುತ್ತಾರೆ ? ಯಾವುದೇ ಉತ್ತರದಾಯಿತ್ವ ಇಲ್ಲವೇ ? ಸರ್ಕಾರ ಆಕ್ಸಿಜನ್ ಪೂರೈಸಲು ಸಾಧ್ಯವಾಗದ ಕಾರಣಕ್ಕೆ ಇನ್ನೂ ಎಷ್ಟು ಜನರು ಸಾಯಿಸಲ್ಪಡುತ್ತಾರೆ ?” ಎಂದು ಪ್ರಶ್ನೆ ಹಾಕಿದ್ದಾರೆ.
ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ಗೆ ಕರೊನಾ; ಸ್ಕ್ಯಾನ್ಗೆ ಹೋದಾಗ ಸೋಂಕು ?
ಆಸ್ಪತ್ರೆ ದಾಖಲಾತಿಗೆ ರಾಷ್ಟ್ರೀಯ ನೀತಿ ರೂಪಿಸಿ : ಕೇಂದ್ರಕ್ಕೆ ಸುಪ್ರೀಂ ಸೂಚನೆ