ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಗೆದ್ದಿರುವ ಕಾಂಗ್ರೆಸ್ಗೆ ಈಗ ಮುಖ್ಯಮಂತ್ರಿ ಆಯ್ಕೆ ವಿಚಾರವೇ ಕಗ್ಗಂಟಾಗಿ ಪರಿಣಮಿಸಿದ್ದು, ಇಂದು ಶಾಸಕಾಂಗ ಪಕ್ಷದ ಸಭೆಯಲ್ಲೂ ಆ ಕುರಿತು ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಈ ಮಧ್ಯೆ ಅದಕ್ಕಾಗಿ ಮಹತ್ವದ ಕೆಲಸವೊಂದು ನಡೆಯುತ್ತಿದೆ.
ದೆಹಲಿಯಿಂದ ಆಗಮಿಸಿದ್ದ ಎಐಸಿಸಿ ವೀಕ್ಷಕರು ಸಭೆಯಲ್ಲಿ ಒಂದು ಸುತ್ತಿನ ಅಭಿಪ್ರಾಯ ಸಂಗ್ರಹಿಸಿ ಚರ್ಚೆ ಮಾಡಿದ್ದರೂ ಸೂಕ್ತ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರನ್ನು ಮುಖ್ಯಮಂತ್ರಿ ಆಗಿಸಬೇಕು ಎಂಬುದು ಹೈಕಮಾಂಡ್ಗೇ ಬಿಟ್ಟಿದ್ದು ಎಂಬ ನಿರ್ಣಯಕ್ಕೆ ಬರಲಾಗಿತ್ತು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ಕಾಂಗ್ರೆಸ್ನ ಎಲ್ಲ ಶಾಸಕರಿಂದ ಸಹಿ ಮಾಡಿಸಿಕೊಳ್ಳಲಾಗಿತ್ತು. ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಆ ಬಳಿಕವೂ ಮತ್ತೆ ವೈಯಕ್ತಿಕವಾಗಿ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.
ಶಾಸಕರನ್ನು ಪ್ರತ್ಯೇಕವಾಗಿ ಕರೆಸಿ ಮಾತನಾಡುತ್ತಿರುವ ವೀಕ್ಷಕರು, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರು ಸಿಎಂ ಆಗಬೇಕು ಎಂಬ ಅಭಿಪ್ರಾಯ ಕೇಳುತ್ತಿದ್ದಾರೆ. ಇಬ್ಬರ ಪರ ಒಲವಿದ್ದರೂ ತಿಳಿಸಿ ಎಂದಿರುವ ವೀಕ್ಷಕರು ಇಬ್ಬರ ಹೊರತಾಗಿ ಬೇರೆ ಆಯ್ಕೆ ಇದ್ದರೂ ತಿಳಿಸಿ ಎಂದೂ ಹೇಳಿದ್ದಾರೆ. ಅಲ್ಲದೆ ತಟಸ್ಥವಾಗಿ ಉಳಿಯುವುದಿದ್ದರೂ ಆ ಬಗ್ಗೆಯೂ ಹೇಳಿ ಎಂಬ ಆಯ್ಕೆಗಳೊಂದಿಗೆ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ಇಂದು ಎಷ್ಟು ಸಾಧ್ಯವೋ ಅಷ್ಟು ಅಭಿಪ್ರಾಯ ಸಂಗ್ರಹಕ್ಕೆ ನಿರ್ಧರಿಸಿರುವುದರಿಂದ ತಡರಾತ್ರಿಯವರೆಗೂ ಈ ಮಹತ್ವದ ಕೆಲಸ ನಡೆಯುವ ಲಕ್ಷಣಗಳು ಗೋಚರಿಸಿವೆ. ಶಾಸಕರ ಅಭಿಪ್ರಾಯದೊಂದಿಗೆ ವೀಕ್ಷಕರು ನಾಳೆ ದೆಹಲಿಗೆ ತೆರಳಲಿದ್ದು, ಆ ಬಳಿಕ ಸಿಎಂ ಆಯ್ಕೆ ನಿರ್ಣಾಯಕ ಹಂತಕ್ಕೆ ಬರಲಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ: ಸಿಎಂ ಆಯ್ಕೆ ಕುರಿತು ಆಯ್ತು ಈ ನಿರ್ಧಾರ