More

    ಅಭ್ಯರ್ಥಿ ಆಯ್ಕೆಗೆ ಸಮಿತಿ ರಚನೆ

    ಹುಣಸೂರು: ನಗರಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಗಾಗಿ ಸಮಿತಿ ರಚಿಸಲಾಗುವುದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ತಿಳಿಸಿದರು.

    ಪಟ್ಟಣದಲ್ಲಿ ಗುರುವಾರ ಕರೆಯಲಾಗಿದ್ದ ಕಾರ್ಯಕರ್ತರು ಮತ್ತು ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದರು.
    ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರಬಹುದು. ಆದರೆ ಮತದಾರ ನಮಗೆ ಎರಡನೇ ಸ್ಥಾನದೊಂದಿಗೆ ಹೆಚ್ಚಿನ ಮತಗಳನ್ನೂ ನೀಡಿದ್ದಾನೆ. ಹುಣಸೂರು ನಗರವ್ಯಾಪ್ತಿಯಲ್ಲಿ 9 ಸಾವಿರಕ್ಕೂ ಅಧಿಕ ಮತಗಳು ದೊರಕಿವೆ. ಇದು ನಮಗೆ ಆಶಾದಾಯಕವಾಗಿದ್ದು, ವಾರ್ಡ್‌ಗಳಲ್ಲಿ ಜನಮನ್ನಣೆ ಗಳಿಸಿರುವ, ಜನರೊಂದಿಗೆ ಸತತ ಸಂಪರ್ಕ ಸಾಧಿಸಿರುವ ವ್ಯಕ್ತಿಗಳನ್ನು ಹಾಗೂ ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಲಿದ್ದೇವೆ. ಅಲ್ಲದೆ ಪಕ್ಷದ ವತಿಯಿಂದ ಸಾಕಷ್ಟು ಆರ್ಥಿಕ ಸಹಕಾರವೂ ಸಿಗಲಿದೆ ಎಂದರು.

    ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 6 ವರ್ಷಗಳು ಜನಪರ ಯೋಜನೆಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ಕಳೆದ 4 ತಿಂಗಳಲ್ಲಿ ಹುಣಸೂರಿಗೆ ನೀಡಿರುವ ಕೊಡುಗೆಗಳನ್ನು ಮತದಾರರಿಗೆ ತಿಳಿಸುವ ಕಾರ್ಯ ಮಾಡೋಣ. ಹುಣಸೂರು ಜಿಲ್ಲೆಯಾಗಿಸುವುದರಿಂದ ಆಗುವ ಅನುಕೂಲಗಳ ಕುರಿತು ಜನರಿಗೆ ಮಾಹಿತಿ ಒದಗಿಸೋಣ ಎಂದರು.

    ನಗರಸಭೆ ಅಧಿಕಾರ ಹಿಡಿಯೋಣ: ಜ.17ರಿಂದಲೇ ಆಯ್ಕೆ ಸಮಿತಿ ಪ್ರತಿವಾರ್ಡ್‌ಗೂ ಭೇಟಿ ನೀಡಿ ಆಕಾಂಕ್ಷಿಗಳ ಕುರಿತು ಮಾಹಿತಿ ಕಲೆಹಾಕಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಿದೆ. ಜ.20ರೊಳಗೆ ಎಲ್ಲ 31 ವಾರ್ಡ್‌ಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಳ್ಳಲಿದೆ. ಕಾರ್ಯಕರ್ತರ ಸಂಘಟಿತ ಪ್ರಯತ್ನದಿಂದ ಗೆಲುವು ಸಾಧ್ಯವಾಗಲಿದೆ. ರಾಜ್ಯದಲ್ಲೂ ನಮ್ಮದೇ ಸರ್ಕಾರ ಇರುವುದರಿಂದ ಅಭಿವೃದ್ಧಿ ಯೋಜನೆಗಳನ್ನು ತರಲು ಅನುಕೂಲವಾಗಲಿದೆ. ಈ ಕುರಿತು ಮತದಾರರಲ್ಲಿ ಅರಿವು ಮೂಡಿಸೋಣ ಎಂದು ಹೇಳಿದರು.

    ಮುಖಂಡ ಸತ್ಯಪ್ಪ ಮಾತನಾಡಿ, ಹುಣಸೂರಿನಲ್ಲಿ 24 ವರ್ಷಗಳಿಂದ ಬಡವರಿಗೆ ನಿವೇಶನ, ವಸತಿ ಒದಗಿಸಿಲ್ಲ. ಲಕ್ಷ್ಮಣತೀರ್ಥ ನದಿ ಮಲಿನಗೊಳ್ಳುವುದು ನಿಂತಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳು ಕೆಟ್ಟು ಹೋಗಿವೆ. ಮಾರುತಿ ಬಡಾವಣೆ ಸೇರಿದಂತೆ ಹಲವಾರು ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಈ ಹಿಂದಿನ ಜನಪ್ರತಿನಿಧಿಗಳ ಅಭಿವೃದ್ಧಿಶೂನ್ಯ ಕೊಡುಗೆಯೇ ಇದಕ್ಕೆಲ್ಲ ಕಾರಣವಾಗಿದ್ದು, ಮತದಾರರಿಗೆ ಪ್ರಧಾನಿ ಮೋದಿ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಕಾರ್ಡ್, ಉಜ್ವಲ್ ಯೋಜನೆ ಸೇರಿದಂತೆ ಹವಾರು ಯೋಜನೆಗಳ ಕುರಿತು ಅರಿವು ಮೂಡಿಸಿ ಮತಯಾಚಿಸೋಣ. ಪಕ್ಷವನ್ನು ಸದೃಢವಾಗಿ ಕಟ್ಟಿ ನಗರಸಭೆ ಅಧಿಕಾರ ಹಿಡಿಯೋಣ ಎಂದರು.

    ಪೌರಕಾರ್ಮಿಕರ ಕಾಲನಿಯ ಸುಬ್ರಹ್ಮಣ್ಯ ಮಾತನಾಡಿ, ಮೋದಿ ನೇತೃತ್ವದ ಸರ್ಕಾರದ ಕೊಡುಗೆಯಾಗಿ ನಮ್ಮ ಕಾಲನಿಯಲ್ಲಿ 160 ಮನೆಗಳು ನಿರ್ಮಾಣಗೊಳ್ಳುತ್ತಿವೆ. ಆದರೆ ಹಾಲಿ ಶಾಸಕರು ಇದು ತಮ್ಮ ಕೊಡುಗೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಿಜಾಂಶವನ್ನು ಕಾಲನಿಯ ಜನತೆಗೆ ತಿಳಿಸಿ ಮತಯಾಚಿಸಬೇಕಿದೆ ಎಂದು ಹೇಳಿದರು.
    ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ನಗರಾಧ್ಯಕ್ಷ ರಾಜೇಂದ್ರ, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಕೆ.ಟಿ.ಗೋಪಾಲ್, ಶಂಕರ್, ಚಂದ್ರಶೇಖರ್, ಗರಡಿ ಶ್ರೀನಿವಾಸ್, ಸೋಮಶೇಖರ್, ಕಾರ್ತೀಕ್, ಪ್ರಕಾಶ್, ವಿವೇಕ್, ಸುಬ್ಬಣ್ಣ, ಗೋವಿಂದನಾಯಕ, ಕಿರಣ್‌ಕುಮಾರ್ ಹಾಜರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts