ಬೆಂಗಳೂರು: ಕರ್ತವ್ಯದ ವೇಳೆ ಬಾಡಿವೋರ್ನ್ ಕ್ಯಾಮರಾ ಧರಿಸುವುದರಿಂದ ಯಾವುದೇ ಅಪಾಯ ಇಲ್ಲವೆಂದು ಸ್ವತಃ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರೇ ಕ್ಯಾಮರಾ ಧರಿಸಿ ಮೇಲ್ಪಂಕ್ತಿ ತೋರಿದ್ದಾರೆ. ಇದರ ಜೊತೆಗೆ ಸಂಚಾರ ಮತ್ತು ಸಿವಿಲ್ ಪೊಲೀಸರು ಕರ್ತವ್ಯದ ಸಮಯದಲ್ಲಿ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸುವಂತೆ ಸೂಚನೆ ಸಹ ಕೊಟ್ಟಿದ್ದಾರೆ.
ಬೆಂಗಳೂರು ನಗರ ಪೊಲೀಸ್ ವಿಭಾಗದಿಂದ ಪಾರದರ್ಶಕ ಸೇವೆ ಒದಗಿಸಲು ಮತ್ತು ಪೊಲೀಸರ ಮೇಲೆ ನಿಗಾವಹಿಸಲು ಸಲುವಾಗಿ ಟ್ರಾಫಿಕ್ ಮತ್ತು ಸಿವಿಲ್ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗಿತ್ತು. ಸಂಚಾರ ಪೊಲೀಸರು ದಂಡ ವಿಧಿಸುವಾಗ, ಸಿವಿಲ್ ಪೊಲೀಸರು ರಾತ್ರಿಗಸ್ತು, ಪ್ರತಿಭಟನೆ, ಧರಣಿ ಸೇರಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಮಯದಲ್ಲಿ ಕಡ್ಡಾಯವಾಗಿ ಕ್ಯಾಮರಾ ಧರಿಸುವಂತೆ ಸೂಚನೆ ನೀಡಲಾಗಿದೆ. ಇದರ ಮೂಲಕ ಕಮಾಂಡ್ ಸೆಂಟರ್ನಿಂದ ನಿಗಾ ವಹಿಸುವಂತೆ ಮತ್ತು ಪಾರದರ್ಶಕ ಸೇವೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ.
ಈ ಕ್ಯಾಮರಾ ಧರಿಸಿ ಸೇವೆ ಸಲ್ಲಿಸುತ್ತಿದ್ದಾಗ ಬಿಸಿ ಆಗಲಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿತ್ತು. ಭಯಗೊಂಡ ಪೊಲೀಸರು ಅಸಮಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಭಯದಲ್ಲಿ ಮತ್ತು ಒಲ್ಲದ ಮನಸ್ಸಿನಲ್ಲಿ ಕ್ಯಾಮರಾ ಬಳಕೆ ಮಾಡುತ್ತಿರುವುದು ಕಂಡುಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಬಿ.ದಯಾನಂದ್, ಶುಕ್ರವಾರ ಸ್ವತಃ ಅವರೇ ಬಾಡಿವೋರ್ನ್ ಕ್ಯಾಮರಾ ಧರಿಸಿ ಛಾಯಚಿತ್ರವನ್ನು ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದರ ಮೂಲಕ ಹಿಂಜರಿಯುತ್ತಿದ್ದ ಪೊಲೀಸರಿಗೆ ಧೈರ್ಯ ತುಂಬುವ ಜೊತೆಗೆ ಬಾಡಿವೋರ್ನ್ ಕ್ಯಾಮರಾವನ್ನು ಕಡ್ಡಾಯವಾಗಿ ಬಳಕೆ ಮಾಡುವಂತೆ ಕಟ್ಟಾಜ್ಞೆ ಮಾಡಿದ್ದಾರೆ.