ಕಡೂರು: ತಾಲೂಕು ಸತತ 20 ವರ್ಷಗಳಿಂದ ಬರಕ್ಕೆ ತುತ್ತಾಗಿರುವುದರಿಂದ ತೆಂಗು ಬೆಳೆಗಾರು ಸಂಕಷ್ಟದಲ್ಲಿದ್ದಾರೆ ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಎಪಿಎಂಸಿ ಆವರಣದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯಿಂದ 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ನ್ಯಾಫೆಡ್ ಮೂಲಕ ಊಂಡೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಬ್ಬರಿ ಖರೀದಿಯಲ್ಲಿ ತೆಗೆದುಕೊಳ್ಳುವ ನಿಯಮಗಳನ್ನು ಮತ್ತೆ ಬದಲಾಯಿಸಲು ಸಾಧ್ಯವಿಲ್ಲ. ಕೊಬ್ಬರಿ ಖರೀದಿಯಲ್ಲಿ ಗುಣಮಟ್ಟ ಮತ್ತು ಗಾತ್ರದ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ರ್ಚಚಿಸಿ ಮನವಿ ಮಾಡಲಾಗುವುದು. ಬರದಿಂದ ಕೊಬ್ಬರಿ ಮಾರುವವರ ಸಂಖ್ಯೆ ಕಡಿಮೆಯಾಗಿದೆ. ಮಧ್ಯವರ್ತಿಗಳು ಎಲ್ಲ ಖರೀದಿ ಕೇಂದ್ರಗಳಲ್ಲೂ ಇದ್ದು, ಅವರನ್ನು ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎಪಿಎಂಸಿ ಅಧ್ಯಕ್ಷ ಕೆ.ಎಚ್.ಲಕ್ಕಣ್ಣ ಮಾತನಾಡಿ, ತಾಲೂಕಿನಲ್ಲಿ ತೆಂಗು ಬೆಳೆಗಾರರು ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವುದರಿಂದ ಗುಣಮಟ್ಟದ ಮತ್ತು ಒಂದೇ ಅಳತೆಯ ಊಂಡೆ ಕೊಬ್ಬರಿ ಸಿಗುವುದು ಕಷ್ಟವಾಗಿದೆ. ಇದನ್ನು ಮನಗಂಡು ಸರ್ಕಾರ ರೂಪಿಸಿರುವ ಮಾನದಂಡಗಳನ್ನು ಸರಳೀಕರಣಗೊಳಿಸಿ ರೈತರು ಬೆಳೆದ ಎಲ್ಲ ಕೊಬ್ಬರಿಗಳನ್ನೂ ಖರೀದಿಸಬೇಕು ಎಂದರು.