ಬೆಂಗಳೂರು: ದಾಖಲೆಯ 15ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನನ್ನ ಜೀವಮಾನದಲ್ಲಿಯೇ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪಡೆದ ಸ್ಪಿನ್ ಮಾಂತ್ರಿಕ ಆರ್.ಅಶ್ವಿನ್!
2024-25ನೇ ಸಾಲಿನ ರಾಜ್ಯ ಆಯವ್ಯಯ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಬಿಎಸ್ವೈ ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಮುಂದುವರಿದ ಭಾಗವಾಗಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಕೇಂದ್ರ ಸರ್ಕಾರವನ್ನು ದೂರಲು ಈ ಬಜೆಟ್ ಮಂಡಿಸಿದಂತಿದೆ. ಗೊತ್ತುಗುರಿಯಿಲ್ಲದ, ರಾಜ್ಯದ ಅಭಿವೃದ್ಧಿಗೆ ಮಾರಕ ಎಂದು ಗುಡುಗಿದರು.
ಈ ಬಜೆಟ್ ಎಲ್ಲಾ ದೃಷ್ಟಿ ಕೋನದಲ್ಲಿಯೂ ಕಳಪೆಯಾಗಿದೆ. ಬಜೆಟ್ನ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆಯೇ ಹೊರತು ರಾಜ್ಯದ ಅಭಿವ್ರದ್ಧಿಗೆ ನಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ದಾಖಲೆಯ 15ನೇ ಬಜೆಟ್ ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ @siddaramaiah ರವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಮುಂದುವರಿದ ಭಾಗವಾಗಿ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು, ಕೇಂದ್ರ ಸರ್ಕಾರವನ್ನು ದೂರಲು ಈ ಬಜೆಟ್ ಮಂಡಿಸಿದಂತಿದೆ. ಗೊತ್ತುಗುರಿಯಿಲ್ಲದ, ರಾಜ್ಯದ ಅಭಿವೃದ್ಧಿಗೆ… pic.twitter.com/V0kqBx6PJi
— B.S.Yediyurappa (@BSYBJP) February 16, 2024
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಈ ಆಯ- ವ್ಯಯ ಕಾಣುತ್ತಿದೆ. ವಾಸ್ತವಿಕ ಅಂಕಿಸಂಖ್ಯೆಗಳನ್ನು ನೀಡದೇ ಕೇವಲ ಕಾಲ್ಪನಿಕ ಅಂಕಿಸಂಖ್ಯೆಗಳನ್ನು ನೀಡಿ ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚುವರಿ ಅನುದಾನ ಬರಬೇಕಿತ್ತು ಎಂದು ಸಬೂಬು ಹೇಳುತ್ತಾ, ರಾಜ್ಯದ ಜನರನ್ನು ದಿಕ್ಕು ತಪ್ಪಿಸಲೆಂದೇ ಮಾಡಿದ ಆಯ- ವ್ಯಯದಂತೆ ಗೋಚರಿಸುತ್ತಿದೆ ಎಂದು ಬಿಎಸ್ವೈ ಕಿಡಿಕಾಡಿದ್ದಾರೆ.
ಈ ಆಯ-ವ್ಯಯ ರಾಜ್ಯದ ಜನರಿಗೆ ಮಾಡಿದ ಮಹಾ ಮೋಸದಂತೆ ಗೋಚರವಾಗುತ್ತಿದೆ. ರಾಜ್ಯದ ಜನರಿಗೆ ಮೋಸ ಮಾಡುವುದಿರಲಿ, ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ರವರು ನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆಗೇ ಯಾವುದೇ ಅನುದಾನ ನೀಡದೇ ಅವರಿಗೂ ಮೋಸ ಹಾಗೂ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತಿದೆ ಎಂದು ಟೀಕಿಸಿದರು. ಡಿ.ಕೆ.ಶಿವಕುಮಾರ್ ರವರು “ಮೇಕೆದಾಟು” ಪಾದಯಾತ್ರೆ ಮಾಡಿದೆ ಸಾಧನೆ. ಈ ಯೋಜನೆಯನ್ನು ಆರಂಭಿಸುವ ಯಾವ ಖಾತರಿಯೂ ಈ ಆಯ-ವ್ಯಯದಲ್ಲಿಲ್ಲ ಎಂದರು.
ಕೃಷ್ಣ ಕೊಳ್ಳದ ಯೋಜನೆಗಳಿಗೆ ಹಾಗೂ ಮಹಾದಾಯಿ ಯೋಜನೆ ಹಾಗೂ ನವಿಲೆ ಜಲಾಶಯ ಯೋಜನೆಗೆ ಅನುದಾನ ನಿಗಧಿಪಡಿಸಿಲ್ಲ. ಇದರಿಂದ ರೈತರಿಗೆ ಹಾಗೂ ಹಿಂದುಳಿದ ಭಾಗಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ರಾಜ್ಯದ ರಾಜಧಾನಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಯಾವುದೇ ಅನುದಾನ ನಿಗಧಿಪಡಿಸಿಲ್ಲ. ಕೇವಲ ಘೋಷಣೆಗಳನ್ನಷ್ಟೇ ಮಾಡಲಾಗಿದೆ. ಇದರಿಂದ ಬೆಂಗಳೂರಿನ ಯಾವ ಸಮಸ್ಯೆಗಳಿಗೂ ಮುಕ್ತಿ ಸಿಗುವುದಿಲ್ಲ. ಪರಿಣಾಮವಾಗಿ ಬೆಂಗಳೂರಿಗೆ ಹರಿದು ಬರುವ ಬಂಡವಾಳ ಹೂಡಿಕೆ ಕಡಿಮೆಯಾಗಿ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಹೇಳಿದ್ದಾರೆ.
ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ 7ನೇ ವೇತನ ಆಯೋಗ ಅನುಷ್ಠಾನಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟವಾದ ಘೋಷಣೆ ಇಲ್ಲ. ಇದರಿಂದ ಖಜಾನೆ ಖಾಲಿಯಾಗಿರುವುದು ಕಂಡುಬರುತ್ತದೆ. ಒ.ಪಿ.ಎಸ್. ಯೋಜನೆ ಪುನರ್ ಜಾರಿಗೆ ತರುತೇವೆ ಎಂದು ಆಶ್ವಾಸನೆ ಮಾಡಿ ಬಂದ ಸರ್ಕಾರ ಈ ಬಗ್ಗೆ ಚಕಾರವನ್ನೇ ಎತ್ತಿಲ್ಲ ಎಂದಿದ್ದಾರೆ.
ರಾಜ್ಯ ಆರ್ಥಿಕವಾಗಿ ದಿವಾಳಿ: ತಮ್ಮ ವರುಣಾ ಕ್ಷೇತ್ರಕ್ಕೆ 2000 ಕೋಟಿಗಳನ್ನು ಬಜೆಟ್ನಲ್ಲಿ ಒದಗಿಸಿದ್ದು ರಾಜ್ಯದ ಬೇರೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೇ ತಾರತಮ್ಮ ಮರೆದಿದ್ದಾರೆ. 2023-24 ನೇ ಸಾಲಿನಲ್ಲಿ ರೂ.12,522 ಕೋಟಿಗಳ ರಾಜಸ್ಥ ಕೊರತೆ ಆಯ-ವ್ಯಯ ಮಂಡಿಸಿದ ಮುಖ್ಯಮಂತ್ರಿಯವರು 2024-25ನೇ ಸಾಲಿಗೆ ರೂ.27,353 ಕೋಟಿಗಳ ರಾಜಪ್ಪ ಕೊರತೆ ಬಜೆಟ್ ಮಂಡಿಸುತ್ತಿರುವುದು, ರಾಜ್ಯವು ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
2023-24 ನೇ ಸಾಲಿನಲ್ಲಿ ರೂ. 85,928 ಕೋಟಿಗಳ ಸಾಲಮಾಡಲಾಗಿದೆ. 2024-25 ನೇ ಸಾಲಿನಲ್ಲಿ ರೂ. 1,05,495 ಕೋಟಿಗಳಿಗೆ ಸಾಲದ ಮೊತ್ತ ಹೆಚ್ಚಾಗಲಿದೆ. ಇದರಿಂದ ಕಾಂಗ್ರೇಸ್ ಸರ್ಕಾರದ ಆಡಳಿತದಿಂದ ರಾಜ್ಯವು ದಿವಾಳಿಯಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
ಒಟ್ಟಾರೆಯಾಗಿ ಸಿಎಂ ಸಿದ್ದರಾಮಯ್ಯನವರು ಮಂಡಿಸಿರುವ 2024-25ರ ಆಯ- ವ್ಯಯವು ಗೊತ್ತುಗುರಿ ಇಲ್ಲದ ರಾಜ್ಯದ ಅಭಿವೃದ್ಧಿಗೆ ಮಾರಕವಾದ ಹಾಗೂ ರಾಜ್ಯದ ಹಣ ಕಾಸು ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್ ಎಂದರೆ ತಪ್ಪಾಗಲಾರದು ಎಂದು ಮಾಜಿ ಸಿಎಂ ಬಿಎಸ್ವೈ ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.