ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ದಾಖಲೆಯ ಬಜೆಟ್ ಮಂಡಿಸುತ್ತಿದ್ದಾರೆ. ಕಾಂಗ್ರೆಸ್ನ ಚುನಾವಣಾಪೂರ್ವ ಗ್ಯಾರಂಟಿ ಜಾರಿಯ ಸವಾಲು ಒಂದೆಡೆಯಾದರೆ, ಗ್ಯಾರಂಟಿ ನಡುವೆ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳಿಗೆ ಅನುದಾನ ಹಂಚಿಕೆಯ ಸವಾಲು ಇನ್ನೊಂದೆಡೆ. ಈ ಎರಡನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡುತ್ತಿರುವ ಸಿದ್ದರಾಮಯ್ಯ, ಈಗಾಗಲೇ ಅಬಕಾರಿ, ಮುದ್ರಾಂಕ ಶುಲ್ಕ ಸೇರಿಂದ ಹಲವು ಶುಲ್ಕಗಳನ್ನು ಏರಿಸಿದ್ದಾರೆ. ಅಲ್ಲದೆ, ಹೆಚ್ಚುವರಿ ಸಾಲ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.
ಕಳೆದ ಫೆಬ್ರವರಿ 17ರಂದು ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಚುನಾವಣಾಪೂರ್ವ ಬಜೆಟ್ ಮಂಡನೆ ಮಾಡಿದ್ದರು. ಈ ವೇಳೆ ಬಜೆಟ್ನಲ್ಲಿ 77,750 ಕೋಟಿ ರೂ. ಈ ವರ್ಷಕ್ಕೆ ಸಾಲ ಮಾಡಲಾಗಿತ್ತು. ಈಗ ಹೆಚ್ಚುವರಿ ಸಾಲ ಮಾಡಲು ಕಾಂಗ್ರಸ್ ಸರ್ಕಾರ ತೀರ್ಮಾನಿಸಿದೆ. ಒಟ್ಟಾರೆ 85,818 ಕೋಟಿ ಸಾಲ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಅಲ್ಲಿಗೆ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ 8068 ಕೋಟಿ ರೂಪಾಯಿ ಸಾಲ ಮಾಡಲಿದ್ದಾರೆ.
ಗ್ಯಾರಂಟಿಗಳ ಜಾರಿಗೆ ಶೇ. 26ರಷ್ಟು ಸಾಲ
ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳ ಜಾರಿಗೆ ಶೇ. 26ರಷ್ಟು ಸಾಲ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದಿಂದ ಶೇಕಡಾ 4ರಷ್ಟು ಅನುದಾನದ ನಿರೀಕ್ಷೆಯಿದ್ದು, ಶೇಕಡ.50ರಷ್ಟು ತೆರಿಗೆ ಆದಾಯದಿಂದ ಹಣ ಹೊಂದಿಸಲು ನಿರ್ಧಾರ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಅಬಕಾರಿ ಮೇಲಿನ ತೆರಿಗೆಯನ್ನು ರಾಜ್ಯ ಸರ್ಕಾರ ಶೇ. 20 ರಷ್ಟು ಏರಿಕೆ ಮಾಡಿದೆ. ಮುದ್ರಾಂಕ, ರಾಯಲ್ಟಿ ಸೇರಿದಂತೆ ಇನ್ನಿತರ ತೆರಿಗೆಯನ್ನು ಹೆಚ್ಚು ಮಾಡಿದ್ದು, ಗ್ಯಾರಂಟಿ ಯೋಜನೆ ಜಾರಿಗೆ ಜತೆಗೆ ಮೂಲ ಸೌಕರ್ಯ ಅಭಿವೃದ್ಧಿಗೆ ತೆರಿಗೆ ಹೊರೆ ಮಾತ್ರವಲ್ಲದೆ, ಸಾಲದ ಹೊರೆಯನ್ನು ಹೇರಲು ಸರ್ಕಾರ ನಿರ್ಧಾರ ಮಾಡಿದೆ.
ಮೀನುಗಾರರಿಗೆ ಭರಪೂರ ಪ್ರೋತ್ಸಾಹ: ಡೀಸೆಲ್ ಪ್ರಮಾಣ ಹೆಚ್ಚಳ, ಬಡ್ಡಿರಹಿತ ಸಾಲದ ಮಿತಿ ಹೆಚ್ಚಳ