ಬೆಂಗಳೂರು: ಕರೊನಾ ವೈರಸ್ ತಡೆಗಟ್ಟಲು ಲಾಕ್ಡೌನ್ ಅನಿವಾರ್ಯ ಆಗಿರುವುದರಿಂದ ಮುಂದಿನ 15 ದಿನಗಳ ಕಾಲ ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಬಳಿಕ ಸಿಎಂ ಬಿಎಸ್ವೈ ಸುದ್ದಿಗೋಷ್ಠಿ ನಡೆಸಿದರು.
ಪ್ರಧಾನಿಯವರು 4 ಗಂಟೆ ಕಾಲ ಎಲ್ಲ ರಾಜ್ಯದ ಸಿಎಂ ಜತೆ ಮಾತನಾಡಿ ಸ್ಥಿತಿಗತಿ ತಿಳಿದುಕೊಂಡರು. ಪ್ರಕರಣ ಹೆಚ್ಚುತ್ತಿರುವ ಹಾಗೂ ಸಮುದಾಯಕ್ಕೆ ಹರಡುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಲಾಕ್ಡೌನ್ ಸಡಿಲ ಆಗಬಾರದು. ಇನ್ನು 15 ದಿನ ಲಾಕ್ಡೌನ್ ಅನಿವಾರ್ಯ ಎಂದು ಇಂಗಿತ ವ್ಯಕ್ತಪಡಿಸಿದ್ದಾಗಿ ಬಿಎಸ್ವೈ ತಿಳಿಸಿದರು.
ಮುಂದಿನ ದಿನಗಳ ಲಾಕ್ಡೌನ್ ವಿಭಿನ್ನವಾಗಿರಲಿದೆ. ಇನ್ನು ಎರಡ್ಮೂರು ದಿನದಲ್ಲಿ ಲಾಕ್ಡೌನ್ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ. ಕೃಷಿ, ಕೈಗಾರಿಕೆಗೆ ಅನುಕೂಲವಾಗಿವಂತೆ ಕೆಲವು ನಿಯಮವನ್ನು ಎರಡು ದಿನದಲ್ಲಿ ತಿಳಿಸಲಾಗುವುದು. ಮೀನುಗಾರಿಕೆಗೆ ಹಾಗೂ ಕೃಷಿಗಕರಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗುತ್ತದೆ. ಅಲ್ಲದೆ, ಸರ್ಕಾರಿ ಕಚೇರಿಗಳ ಕಾರ್ಯ ಚಟುವಟಿಕೆಗೂ ಅವಕಾಶ ನೀಡುವ ಸೂಚನೆಯನ್ನು ಬಿಎಸ್ವೈ ನೀಡಿದರು.
ಪ್ರತಿ ದಿನ ಎರಡು ಲಕ್ಷ ಮಾಸ್ಕ್ ವಿತರಣೆ ಮಾಡಲಾಗುವುದು. ಪ್ರಯೋಗಾಲಯ ಈಗ 220 ಇದ್ದು, ಏಪ್ರಿಲ್ ಅಂತ್ಯಕ್ಕೆ 300 ಪ್ರಯೋಗಾಲಯ ಸ್ಥಾಪನೆ ಮಾಡಲಾಗುವುದು. ಮೇ ತಿಂಗಳಿಂದ 1 ಲಕ್ಷ ಕರೊನಾ ಪರೀಕ್ಷೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಮುಂದೆ ಸಂಭವಿಸುವ ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ದರಾಗುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ನಗರ ಪ್ರದೇಶದಿಂದ ಜನರು ಹೋಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ಲಾಕ್ಡೌನ್ನಲ್ಲಿ ರಾಜಿ ಇಲ್ಲ. ಹಂತಹಂತವಾಗಿ ಕೆಲವೆಡೆ ಲಾಕ್ಡೌನ್ ತೆರವುಗೊಳಿಸಲಾಗುವುದೆಂದು ಹೇಳಿದರು.
ಕೇಂದ್ರ ಸರ್ಕಾರ ಲಾಕ್ಡೌನ್ನಲ್ಲಿ ವಿನಾಯಿತಿ ನೀಡಿದರೂ ರಾಜ್ಯದಲ್ಲಿ ಕೆಲವೊಂದು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಮುಂದಿನ ಕ್ರಮ ಇರಲಿದೆ. ಕೃಷಿ ಉತ್ಪನ್ನಗಳ ಸಾಗಾಣೆಗೆ ಮುಕ್ತ ಅವಕಾಶ ನೀಡಲಾಗಿದೆ. ಯಾರಾದರು ತೊಂದರೆ ಮಾಡಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ರೈತನ ಹಿತ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವೆಂದರು.
ಇದೇ ವೇಳೆ ಏಪ್ರಿಲ್ 14ರ ಬಳಿಕ ಮದ್ಯ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಎಸ್ವೈ, ಎಲ್ಲವೂ ಇನ್ನೆರಡು ದಿನದಲ್ಲಿ ನಿರ್ಧಾರ ಆಗುತ್ತದೆ. ಮದ್ಯ ಮಾರಾಟದ ಬಗ್ಗೆ ಪ್ರಧಾನ ಮಂತ್ರಿಗಳ ಮಾರ್ಗಸೂಚಿ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈಗಾಗಲೇ 801 ತಬ್ಲಿಘಿ ಕಾರ್ಯಕರ್ತರು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇತರೆ ರಾಜ್ಯಗಳಲ್ಲಿಯೂ 541 ಮಂದಿ ಇರುವ ಮಾಹಿತಿ ಇದೆ. ವಿದೇಶಿ ತಬ್ಲಿಘಿಗಳನ್ನು ಗುರುತಿಸಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ವೀಸಾ ಉಲ್ಲಂಘಿಸಿದ್ದರೆ ಅವರ ವಿರುದ್ಧ ಕಠಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.