ಬೆಂಗಳೂರು: ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ರಾಜ್ಯಾದ್ಯಂತ ಲಾಕ್ಡೌನ್ ಹೇರಲಾಗಿದೆ. ಸದ್ಯದ ಸ್ಥಿತಿಯಲ್ಲಿ ಆರೋಗ್ಯ ಬಿಕ್ಕಟ್ಟಿನ ನಡುವೆ ಆರ್ಥಿಕ ಚಟುವಟಿಕೆಯಿಲ್ಲದೆ ಕಳೆಗುಂದಿರುವ ಜನತೆಗೆ ಧೈರ್ಯ ತುಂಬಲು ಹಾಗೂ ಲಾಕ್ಡೌನ್ ಪರಿಸ್ಥಿತಿಯನ್ನು ಅವಲೋಕಿಸಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನಗರ ಪ್ರದಕ್ಷಿಣೆ ಮಾಡಿದರು.
ರಾಜಧಾನಿಯಲ್ಲಿ ಲಾಕ್ಡೌನ್ ಸರಿಯಾಗಿ ಪಾಲನೆ ಆಗುತ್ತಿಲ್ಲ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಭಾನುವಾರ ಮಾಸ್ಕ್ ಧರಿಸಿ ಖುದ್ದಾಗಿ ಸಿಎಂ ಬಿಎಸ್ವೈ ಫೀಲ್ಡಿಗಿಳಿದರು. ನಗರದ ವಿವಿಧೆಡೆಗೆ ಸರ್ಪ್ರೈಸ್ ವಿಸಿಟ್ ಮಾಡಿ, ಲಾಕ್ಡೌನ್ ಹೇಗೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಿದರು.
ಮೊದಲಿಗೆ ಗೊರುಗುಂಟೆಪಾಳ್ಯಕ್ಕೆ ಭೇಟಿ ನೀಡಿದ ಸಿಎಂ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಜತೆ ಮಾಹಿತಿ ಪಡೆದರು. ಲಾಕ್ಡೌನ್ ಹೇಗಿದೆ? ಜನರು ನಿಯಮ ಪಾಲನೆ ಮಾಡ್ತಿದಿರಾ ಎಂದು ಪ್ರಶ್ನಿಸಿದರು. ಬಳಿಕ ರಾಜಕುಮಾರ್ ಸಮಾಧಿ ಮಾರ್ಗವಾಗಿ ತೆರಳಿದರು. ಈ ವೇಳೆ ಲಗ್ಗೇರೆ ಮುಖ್ಯರಸ್ತೆಯಲ್ಲಿ ಡ್ಯೂಟಿ ಹೇಗಿದೆ? ಎಷ್ಟೊತ್ತು ಶಿಫ್ಟ್? ಎಂದು ಪೊಲೀಸರ ಕುಶಲೋಪರಿ ವಿಚಾರಿಸಿದರು. ಬಳಿಕ ಎಪಿಎಂಸಿಯಲ್ಲಿ ಒಂದು ಸುತ್ತುಹಾಕಿದರು. ಈ ವೇಳೆ ಯಾವುದೇ ಅಂಗಡಿಗಳು ತೆರೆದಿರಲಿಲ್ಲ.
ಇದಾದ ಬಳಿಕ ಸುಮನಹಳ್ಳಿಗೆ ಭೇಟಿ ನೀಡಿದರು. ನಂತರ ಕಾಮಾಕ್ಷಿಪಾಳ್ಯ ರಸ್ತೆಯಲ್ಲಿ ನಿಲ್ಲಿಸಿ, ಸಾರ್ವಜನಿಕರ ಅಭಿಪ್ರಾಯ ಕೇಳಿದರು. ಲಾಕ್ಡೌನ್ ಆಗಿರೋದು ಒಳ್ಳೆಯದಾ ಹೇಗೆ ಎಂದು ಮಹಿಳೆಯೊಬ್ಬರನ್ನು ಸಿಎಂ ಪ್ರಶ್ನಿಸಿದರು. ಅದಕ್ಕೆ ಮಹಿಳೆ ಒಳ್ಳೆಯದು ಸರ್ ಎಂದು ಉತ್ತರಿಸಿದರು.
ಇದರ ಬೆನ್ನಲ್ಲೇ ಗೋವಿಂದರಾಜನಗರಕ್ಕೆ ತೆರಳಿದ ಸಿಎಂ ಸೂಪರ್ ಮಾರ್ಕೆಟ್ ಅಂಗಡಿಯೊಂದಕ್ಕೆ ತೆರಳಿ ಮಾಲೀಕನ ಜತೆ ಮಾತುಕತೆ ನಡೆಸಿದರು. ಎಲ್ಲ ದಿನಸಿ ಸಾಮಾಗ್ರಿಗಳು ಸಿಗುತ್ತಿವೆಯಾ ಎಂದು ಪ್ರಶ್ನಿಸಿದರು. ಕೆಲವೊಂದು ಸಾಮಾಗ್ರಿಗಳು ಸಿಗುತ್ತಿಲ್ಲ. ಹಿಂದೆ ನೀಡಿದ ಪಾಸ್ಗಳು ನಾಳೆಗೆ ಮುಕ್ತಾಯ ಆಗುತ್ತದೆ. ಬೇರೆ ವ್ಯವಸ್ಥೆಯನ್ನು ಮಾಡಿ ಎಂದು ಮಾಲೀಕ ಮನವಿ ಮಾಡಿಕೊಂಡರು. ಅಲ್ಲಿದ್ದ ಸ್ಥಳಿಯರನ್ನು ಹಾಲು ಮತ್ತು ಅಗತ್ಯ ವಸ್ತುಗಳು ಸಿಗುತ್ತಿವೆಯಾ ಎಂದು ವಿಚಾರಿಸಿದರು.
ಬಳಿಕ ವಿಜಯನಗರಕ್ಕೆ ಭೇಟಿ ನೀಡಿದ ಸಿಎಂ ಬಿಎಸ್ವೈ ಮಾರ್ಕೆಟ್ ಪರಿಶೀಲನೆ ನಡೆಸಿದರು. ಈ ವೇಳೆ 500 ರೂ. ಕೊಟ್ಟು ಬಾಳೆಹಣ್ಣು ಖರೀದಿಸಿದರು. ಎರಡು ದಿನ ಕಾಯಿರಿ ಆಮೇಲೆ ಓಡಾಡಲು ಜನರಿಗೆ ಅನುವು ಮಾಡಿಕೊಡುತ್ತೇವೆ ಎಂದು ವ್ಯಾಪರಸ್ಥರಿಗೆ ಭರವಸೆ ನೀಡಿದರು. ಈ ವೇಳೆ ನಮ್ಮ ಕರ್ನಾಟಕ ಸೇಫ್ ಆಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಆಡಳಿತವು ಚೆನ್ನಾಗಿದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯ ಉತ್ತಮವಾಗಿದೆ ಎಂದು ಸ್ಥಳೀಯರು ಸಿಎಂ ಜತೆ ಅಭಿಪ್ರಾಯ ಹಂಚಿಕೊಂಡರು.
ಕೆಎಸ್ಆರ್ಟಿಸಿಯಲ್ಲಿ ಕಾದಿರಿಸಿದ್ದ ಮುಂಗಡ ಟಿಕೆಟ್ಗಳು ರದ್ದು: ಹಣ ಮರುಪಾವತಿ ಪ್ರಕ್ರಿಯೆಗೆ ಚಾಲನೆ