ಬೆಂಗಳೂರು: 60ನೇ ವರ್ಷದ ಸಂಭ್ರಮದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಸನ್ಮಾನಿಸಿದ್ದನ್ನು ನಾನೆಂದಿಗೂ ಮರೆಯುವುದಿಲ್ಲ. ಈ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭಾಗವಹಿಸಿರುವುದೇ ಒಂದು ವಿಶೇಷವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಮ್ಮ 78ನೇ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಅರಮನೆ ಮೈದಾನಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಬಿಎಸ್ವೈ ಮಾತನಾಡಿದರು.
ನನ್ನ ಜೀವನದಲ್ಲಿ ನಾನೆಂದು ಶಿಕಾರಿಪುರದ ಜನರನ್ನು ಮರೆಯಲು ಸಾಧ್ಯವಿಲ್ಲ. ಕೇಂದ್ರ ನಾಯಕರ ಸಹಕಾರದಿಂದ ನಾನು ಇಲ್ಲಿ ನಿಂತಿದ್ದೇನೆ. ಪ್ರಧಾನಿ ಮೋದಿ, ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಹಿರಿಯರು ನನಗೆ ಶುಭ ಕೋರಿದರು. 60ನೇ ವರ್ಷದ ಸಂಭ್ರಮದಲ್ಲಿ ವಾಜಪೇಯಿ ಅವರು ಸನ್ಮಾನಿಸಿದ್ದನ್ನು ಮರೆಯಲ್ಲ. ಸಿದ್ದರಾಮಯ್ಯ ಅವರು ಭಾಗವಹಿಸಿರುವುದೇ ಒಂದು ವಿಶೇಷ. ಅವರ ಆತ್ಮೀಯತೆಗೆ ನಾನು ಋಣಿ. ಅವರು ಹಾರೈಸಿದ್ದು ಈ ಕಾರ್ಯಕ್ರಮಕ್ಕೆ ಶೋಭೆ ತಂದಿದೆ ಎಂದು ಹೇಳಿದರು.
ಮೂರುವರೆ ವರ್ಷ ಎಲ್ಲರ ಸಹಕಾರದಿಂದ ನಾಡಿನ ಅಭಿವೃದ್ಧಿಗೆ ಗಮನ ಕೊಡುತ್ತೇನೆ. ನೀರಾವರಿ, ರೈತರ ಜೀವನ ಅಭಿವೃದ್ಧಿ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮ ಮಾಡುತ್ತೇನೆ. ಇದಕ್ಕೆ ಸಿದ್ದರಾಮಯ್ಯರ ಸಂಪೂರ್ಣ ಬೆಂಬಲ ಇದೆ ಎಂದು ಭಾವಿಸಿದ್ದೇನೆ. ಈ ಸಂದರ್ಭದಲ್ಲಿ ಅನಂತ್ಕುಮಾರ್ ಇರಬೇಕಿತ್ತೆಂದು ಸ್ಮರಿಸಿದರು.
ಭಾಷಣದ ಕೊನೆಯಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯರಿಗೆ ಧನ್ಯವಾದ ತಿಳಿಸಿದ ಬಿಎಸ್ವೈ, ವಿಆರ್ಎಲ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಸಂಕೇಶ್ವರ್ ಅವರ ಹೆಸರು ಪ್ರಸ್ತಾಪಿಸಿ ಅಭಿನಂದನೆ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್)