ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ರಾತ್ರಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರಸ್ವಾಮೀಜಿ ಗದ್ದುಗೆ ಪೂಜೆ ಸಲ್ಲಿಸಿ, ಶ್ರೀಸಿದ್ದಲಿಂಗಸ್ವಾಮೀಜಿ ಆಶೀರ್ವಾದ ಪಡೆದರು.
ಡಾ.ಶಿವಕುಮಾರಸ್ವಾಮೀಜಿ ನಮಗೆಲ್ಲಾ ಪ್ರೇರಣೆಯಾಗಿದ್ದರು, ಸಿದ್ಧಗಂಗಾ ಮಠ ತ್ರಿವಿಧ ದಾಸೋಹಕ್ಕೆ ಪ್ರಸಿದ್ಧಿ ಪಡೆದಿದೆ, ಈ ಮಠಕ್ಕೆ ಬಂದಾಗಲೆಲ್ಲಾ ಪ್ರೇರಣೆ ಪಡೆದಿದ್ದೇನೆ. ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಶ್ರೀಮಠಕ್ಕೆ ಆಗಮಿಸಿದ್ದು, ಸ್ವಾಮೀಜಿ ಆಶೀರ್ವಾದ ಪಡೆದಿದ್ದೇನೆ. ನಾಡಿನ ಸೇವೆಗೆ ಮಠದ ಮಾರ್ಗದರ್ಶನ ಪಡೆದಿದ್ದೇನೆ ಎಂದರು.
ಶುಕ್ರವಾರ ರಾತ್ರಿ ನೂತನ ಮಂತ್ರಿಗಳಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣವಾಗಲಿದ್ದು, ರಾಜ್ಯಪಾಲರಿಗೆ ಕಳುಹಿಸಿಕೊಡುತ್ತೇವೆ, ಸಚಿವರಿಗೆ ಖಾತೆ ಹಂಚಿಯಾದ ಕೂಡಲೇ ಕಾರ್ಯನಿರ್ವಹಣೆಗೆ ಅನುಕೂಲವಾಗಲಿದೆ ಎಂದರು. ಮಠದಲ್ಲಿ ಶ್ರೀಸಿದ್ದಲಿಂಗಸ್ವಾಮೀಜಿ ಅವರೊಂದಿಗೆ ಸಿಎಂ ಪ್ರತ್ಯೇಕವಾಗಿ 20 ನಿಮಿಷ ಮಾತುಕತೆ ನಡೆಸಿದರು. ಸಚಿವರಾದ ಮುರಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ, ಶಾಸಕರಾದ ಡಾ.ರಾಜೇಶ್ಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಇದ್ದರು.