ರಾಯಚೂರು: ಜಿಲ್ಲೆಯಲ್ಲಿ 25 ವರ್ಷಗಳ ಹಿಂದೆ ನಕ್ಸಲ್ ಚಟುವಟಿಕೆ ಸಕ್ರಿಯವಿದ್ದಾಗ ನಡೆದಿದ್ದ ನಾಲ್ಕು ಪ್ರಕರಣಗಳ ಆರೋಪ ಹೊತ್ತಿದ್ದ ಸ್ವರಾಜ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ದೊಡ್ಡಿಪಾಳ್ಯ ನರಸಿಂಹಮೂರ್ತಿ ನಿರ್ದೋಷಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪ ಸೇರಿ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ವಿನೋದ ಎಂಬಾತನೇ ನರಸಿಂಹಮೂರ್ತಿ ಎಂದು ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 1994ರಲ್ಲಿ ರಾಯಚೂರಿನ ಬಸವನಬಾವಿ ವೃತ್ತದಲ್ಲಿ ಸುದರ್ಶನರೆಡ್ಡಿ ಎಂಬುವರ ಮೇಲೆ ನಡೆದಿದ್ದ ಗುಂಡಿನ ದಾಳಿಯ ಮೂವರು ಆರೋಪಿಗಳಲ್ಲಿ 2ನೇ ಆರೋಪಿ ಎಂದು, ರಾಯಚೂರು ಗ್ರಾಮೀಣ ಠಾಣೆಯಲ್ಲಿ 1994ರಲ್ಲಿ ಜರುಗಿದ ಶಸ್ತ್ರಾಸ್ತ್ರ ಉಲ್ಲಂಘನೆ ಕಾಯ್ದೆಯಡಿ ಪ್ರಕರಣದಡಿ ಆರೋಪಿ ಎಂದು, ತಾಲೂಕಿನ ಯಾಪಲದಿನ್ನಿ ಠಾಣೆ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸರ್ಕಾರದ ವಿರುದ್ಧ ಪ್ರಚೋದನೆ ನಡೆಸಿದ್ದರು ಎಂದೂ ಆರೋಪ ಮಾಡಲಾಗಿತ್ತು.
ಕಳೆದ ವರ್ಷ ಅ. 24ರಂದು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ರಾಯಚೂರಿಗೆ ಬಂದಿದ್ದ ನರಸಿಂಹಮೂರ್ತಿಯನ್ನು ಪೊಲೀಸರು ಬಂಧಿಸಿದ್ದರು. ಒಂದು ತಿಂಗಳು ಸ್ಥಳೀಯ ಕಾರಾಗೃಹದಲ್ಲಿದ್ದ ನರಸಿಂಹಮೂರ್ತಿ, ಜಾಮೀನು ಪಡೆದು ಹೊರಬಂದಿದ್ದರು. ಪ್ರಕರಣ ಕುರಿತು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಗುರುವಾರ ಈ ತೀರ್ಪು ನೀಡಿದ್ದಾರೆ.
ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ನರಸಿಂಹಮೂರ್ತಿ, ಕಾರ್ಯಾಂಗ, ಶಾಸಕಾಂಗಗಳು ಜನರ ನಂಬಿಕೆ ಕಳೆದುಕೊಂಡಿರುವ ಸಂದರ್ಭದಲ್ಲಿ ನ್ಯಾಯಾಂಗ ನ್ಯಾಯ ಎತ್ತಿ ಹಿಡಿಯವ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಈ ತೀರ್ಪು ಸಾಕ್ಷಿ. ಇದರಿಂದ ಹೋರಾಟಗಾರರ ವಿಶ್ವಾಸ ಮತ್ತಷ್ಟು ಇಮ್ಮಡಿಗೊಂಡಂತಾಗಿದೆ ಎಂದಿದ್ದಾರೆ.