ಔರಂಗಾಬಾದ್: ಭಾರತದಲ್ಲಿ ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರಗಳು ಸಾಕಷ್ಟು ಆಸಕ್ತಿ ತೋರುತ್ತಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ.ರಮಣ ಹೇಳಿದ್ದಾರೆ. ಕೇಂದ್ರ ಕಾನೂನು ಸಚಿವ ಕಿರೆಣ್ ರಿಜಿಜು ಅವರ ಮುಂದೆಯೇ ಸಿಜೆಐ ಈ ಕಳಕಳಿ ವ್ಯಕ್ತಪಡಿಸಿದ್ದಾರೆ.
ಇಂದು(ಅ.23) ಬಾಂಬೆ ಹೈಕೋರ್ಟ್ನ ಔರಂಗಾಬಾದ್ ಪೀಠದ ಅನೆಕ್ಸ್ ಕಟ್ಟಡದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಸಿಜೆಐ ಅವರು, ನ್ಯಾಯಾಂಗಕ್ಕೆ ಉತ್ತಮ ಮೂಲಸೌಕರ್ಯ ಲಭ್ಯವಿಲ್ಲದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಭಾರತದಲ್ಲಿ ನ್ಯಾಯಾಂಗಕ್ಕೆ ಮೂಲಸೌಕರ್ಯ ಒದಗಿಸುವುದು ಯಾವಾಗಲೂ ನಂತರದ ಚಿಂತನೆಯಾಗಿಬಿಟ್ಟಿದೆ. ಈ ಮನಸ್ಥಿತಿಯ ಕಾರಣದಿಂದಾಗಿ ಭಾರತದಲ್ಲಿ ನ್ಯಾಯಾಲಯಗಳು ಇನ್ನೂ ಶಿಥಿಲಗೊಂಡ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕಷ್ಟ ಎದುರಿಸುತ್ತಿವೆ” ಎಂದು ಹೇಳಿದರು.
ದೇಶದ ಶೇಕಡ 26 ರಷ್ಟು ನ್ಯಾಯಾಲಯಗಳಲ್ಲಿ ಮಹಿಳೆಯರಿಗಾಗಿ ಶೌಚಾಲಯಗಳಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, “ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ಪ್ರಾಧಿಕಾರದ ಸ್ಥಾಪನೆಗೆ ನಾನು ಪ್ರಸ್ತಾವನೆ ಕಳುಹಿಸಿದ್ದೇನೆ. ಅದನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ತರುವಂತೆ ಕಾನೂನು ಮತ್ತು ನ್ಯಾಯಾಂಗ ಸಚಿವರನ್ನು ಆಗ್ರಹಿಸುತ್ತೇನೆ” ಎಂದರು. (ಏಜೆನ್ಸೀಸ್)
ವಿಮಾನ ನಿಲ್ದಾಣ ಅಧಿಕಾರಿಗಳ ಬಗ್ಗೆ ದೂರಿದ್ದ ನಟಿ ಸುಧಾ ಚಂದ್ರನ್ ಕ್ಷಮೆ ಕೋರಿದ ಸಿಐಎಸ್ಎಫ್