ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ 2 ತಿಂಗಳಿಂದ ಶಾಹೀನ್ಬಾಘ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಈಗ ಜಾಫ್ರಾಬಾದ್ ಪ್ರದೇಶಕ್ಕೂ ವಿಸ್ತರಿಸಿದೆ.
ಅಂದಾಜು 500ಕ್ಕೂ ಹೆಚ್ಚು ಮಂದಿ ಜಾಫ್ರಾಬಾದ್ ಮೆಟ್ರೋ ರೈಲು ನಿಲ್ದಾಣದ ಬಳಿ ಜಮಾಯಿಸಿದ ಹಿನ್ನೆಲೆಯಲ್ಲಿ ಮೆಟ್ರೋ ರೈಲು ನಿಲ್ದಾಣದ ನಿರ್ಗಮನ ಮತ್ತು ಪ್ರವೇಶ ದ್ವಾರವವನ್ನು ಬಂದ್ ಮಾಡಲಾಯಿತು. ಪ್ರತಿಭಟನಾಕಾರರಲ್ಲಿ ಅಧಿಕ ಮಂದಿ ಮಹಿಳೆಯರೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಜಾಫ್ರಾಬಾದ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಸಲು ನೂರಾರು ಮಂದಿ ಸೇರಿದರು. ತ್ರಿವರ್ಣ ಧ್ವಜ ಹಿಡಿದು ರಸ್ತೆಯಲ್ಲಿ ಧರಣಿ ಕುಳಿತರು. ಕಾಯ್ದೆ ರದ್ದುಪಡಿಸುವವರೆಗೂ ಪ್ರತಿಭಟನೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಸ್ಥಳದಲ್ಲಿ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಜಾಫ್ರಾಬಾದ್ನಲ್ಲಿ ಆರಂಭವಾಗಿರುವ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಕಾನೂನನ್ನು ಅನುಸರಿಸದ ಮತ್ತೊಂದು ಪ್ರದೇಶ ಜಾಫ್ರಾಬಾದ್ ಎಂದು ಅವರು ಟೀಕಿಸಿದ್ದಾರೆ. (ಏಜೆನ್ಸೀಸ್)