ಬೆಳಗಾವಿ: ಇಂದಿನ ಆಧುನಿಕ ನಗರಗಳಲ್ಲಿ ಜನ ಜೀವನಕ್ಕೆ ಬೇಕಾದ ಮೂಲ ಸೌಕರ್ಯ ದೊರೆಯುತ್ತಿರುವುದರ ಹಿಂದೆ ಬಿಲ್ಡರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ರಾಜಕುಮಾರ್ ಮೌರ್ಯ ಹೇಳಿದರು.
ನಗರದ ಹೊರವಲಯದ ಖಾಸಗಿ ಹೋಟೆಲ್ನಲ್ಲಿ ಬೆಳಗಾವಿಯ ಕ್ರೆಡೈ ಆಯೋಜಿಸಿದ್ದ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಲ್ಡರ್ಗಳಿಗೆ ಗೌರವ ಲಭಿಸುವಂತಾಗಬೇಕು. ಅವರ ಕಾರ್ಯ ಹೇಗಿದೆಯೆಂದರೆ, ಕುರುಕ್ಷೇತ್ರ ಯುದ್ಧ ಗೆಲ್ಲಲು ಅರ್ಜುನನ ಹಿಂದಿದ್ದ ಕೃಷ್ಣನ ಪಾತ್ರದಂತೆ ಎಂದರು. ಗ್ರಾಹಕರಿಗೆ ಬೇಕಾದ ಉತ್ಪನ್ನ ಮತ್ತು ಉತ್ಪಾದಕರಿಗೆ ಬೇಕಾದ ಕಚ್ಚಾ ವಸ್ತುಗಳ ಸಾಗಣೆಗೆ ಬಸ್, ರೈಲು ಹಾಗೂ ವಿಮಾನ ಸೇವೆ ಒಳಗೊಂಡಂತೆ ಬೆಳಗಾವಿ ಇಂದು ಎಲ್ಲ ರೀತಿಯಲ್ಲೂ ಬೆಳೆದು ನಿಂತಿದೆ. ಅದೆಲ್ಲವನ್ನು ಬಳಸಿಕೊಂಡು ಸ್ವಯಂ ಅಭಿವೃದ್ಧಿ ಸಾಧಿಸುವುದರ ಜತೆಗೆ ಸಮಾಜವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಬೇಕು ಎಂದರು. ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಮಾತನಾಡಿ, ನಗರದ ಹಲವೆಡೆ ಅನಧಿಕೃತವಾಗಿ ಲೇಔಟ್ ನಿರ್ಮಿಸಿದ್ದಾರೆ. ಕೇವಲ ನೂರು ರೂ. ಬಾಂಡ್ ಪೇಪರ್ ಆಧಾರವಾಗಿಸಿಕೊಂಡು ಜಾಗ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಅಕ್ರಮಗಳ ಕುರಿತಂತೆ ಸಾರ್ವಜನಿಕರು ಜಾಗೃತರಾಗಬೇಕು. ಕೆಲವೇ ವರ್ಷಗಳಲ್ಲಿ ಸ್ಮಾರ್ಟ್ಸಿಟಿ ಯೋಜನೆಯ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ರೆಡೈ ಅಧ್ಯಕ್ಷ ರಾಜೇಶ ಹೆಡ್ಡಾ ಮಾತನಾಡಿ, ಸರ್ಕಾರಿ ನೌಕರರಾಗಿ ದುಡಿಯುವ ಗುಮಾಸ್ತರಿಂದ ಹಿಡಿದು ಇನ್ನಿತರ ಅಧಿಕಾರಿಗಳಿಗೆ ಸಮಾಜದಲ್ಲಿ ದೊರೆಯುವ ಗೌರವವು, ಉದ್ಯೋಗ ನೀಡುವ ಸಣ್ಣ ಉದ್ಯಮಿಗಳಿಗೆ ದೊರೆಯದಿರುವುದು ಖೇದಕರ ಸಂಗತಿ.
ಸಮಾಜದಲ್ಲಿನ ಈ ತಾರತಮ್ಯದಿಂದಲೇ ಈ ಕ್ಷೇತ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು. ಸರ್ಕಾರ ಜಾರಿಗೆ ತಂದಿರುವ ಜಿಎಸ್ಟಿಯಿಂದ ಖರೀದಿ ಮತ್ತು ಮಾರಾಟದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ನಗರ ಮತ್ತು ಗ್ರಾಮೀಣ ಪ್ರದೇಶ ಯಾವುದೇ ಇರಲಿ ಜಾಗ ಮತ್ತು ಜಮೀನು ಖರೀದಿಗೆ ಇದು ಸಕಾಲವಾಗಿದ್ದು, ಜನತೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು. ಎಸ್ಬಿಐನ ಎಜಿಎಂ ಮಂಜುನಾಥ ಭಟ್, ಚೇತನ್ ಕುಲಕರ್ಣಿ, ರಾಜೇಂದ್ರ ಮುದ್ದೇಕರ್, ವಿಜಯ ಪಾಟೀಲ, ಸಚಿನ ಭಂಡಾರಿ ಹಾಗೂ ಹರ್ಷದ್ ಕಲಘಟಗಿ ಹಾಗೂ ಕ್ರೆಡೈ ಸದಸ್ಯರು ಪಾಲ್ಗೊಂಡಿದ್ದರು.