ಕುಷ್ಟಗಿ: ಯುವಕರು, ವೃದ್ಧರು, ಅಂಗವಿಕಲ ಮತದಾರರು ನಿರ್ಭೀತಿಯಿಂದ ಶೇ.100 ರಷ್ಟು ಮತ ಚಲಾಯಿಸಿ ಯೋಗ್ಯ,ಸಮರ್ಥ ನಾಯಕನನ್ನು ಆಯ್ಕೆ ಮಾಡಬೇಕು ಎಂದು ಪಿಡಿಒ ಚಂದಪ್ಪ ಗುಡಿಮನಿ ಹೇಳಿದರು.
ತಾಲೂಕಿನ ಹಿರೇ ಬನ್ನಿಗೊಳ್ದ ಶ್ರೀ ಯುವ ಕನ್ನಿಕಾದೇವಿ ದೇವಸ್ಥಾನದಲ್ಲಿ ಗ್ರಾಪಂ ವತಿಯಿಂದ ಹಮ್ಮಿಕೊಂಡಿದ್ದ ನನ್ನ ಮತ, ನನ್ನ ಹಕ್ಕು,ಮತದಾನ ಮಾಡುವವನೇ ಮಹಾಶೂರ ಎಂಬ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ. ಯಾರೂ ಆಸೆ, ಆಮೀಷಕ್ಕೆ ಒಳಗಾಗದೇ ಸಂತೋಷದಿಂದ ಮತ ಚಲಾಯಿಸಬೇಕು ಎಂದರು.
ವಿಧಾನಸಭಾ ಚುನಾವಣಾ ಅಂಗವಾಗಿ ಗ್ರಾಮದಲ್ಲಿ ಮಹಿಳೆಯರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಯಿತು. 100 ಕ್ಕೂ ಹೆಚ್ಚು ಮಹಿಳೆಯರ ತಂಡ ಕೈಯಲ್ಲಿ ಮೇಣದ ಬತ್ತಿ ಹಿಡಿದು ಜಾಗೃತಿ ಗೀತೆಗಳೊಂದಿಗೆ ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಡೆದು ಗ್ರಾಮಸ್ಥರನ್ನು ಆಕರ್ಷಿಸಿತು.
ಇದೇ ವೇಳೆ ಕಿತ್ತೂರು ರಾಣಿ ಚನ್ನಮ ವೃತ್ತದಲ್ಲಿ ಗ್ರಾಮಸ್ಥರಿಗೆ ತಾಪಂ ಐಇಸಿ ಸಂಯೋಜಕ ಚಂದ್ರಶೇಖರ್ ಹಿರೇಮಠ ಪ್ರತಿಜ್ಞಾವಿಧಿ ಬೋಧಿಸಿದರು.ಪಿಡಿಒ ಚಂದಪ್ಪ ಗುಡಿಮನಿ, ಗ್ರಾಪಂ ಸಿಬ್ಬಂದಿಗಳಾದ ಯಲ್ಲಪ್ಪ,ಯಮನೂರಪ್ಪ , ಅಲ್ಲಸಾಬ್, ಬಸೆಟ್ಟೆಪ್ಪ , ಗೌರಮ್ಮ, ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರಾದ ಮಹೇಶ್ವರಿ ಬಸಮ್ಮ,ಶಾಂತ,ಕಸ್ತೂರಿ ಹಾಗೂ ಇತರರು ಅಂಗನವಾಡಿ, ಆಶಾ, ಕಾರ್ಯಕರ್ತೆಯರು ಇದ್ದರು.
ಇದನ್ನೂ ಓದಿ: https://www.vijayavani.net/voting-awareness-karamudi-bike-rally/