ವಿಜಯವಾಣಿ ಸುದ್ದಿಜಾಲ ಕುಂದಾಪುರ
ದಾನಿಗಳ ನೆರವು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಕಾಳಜಿ ಮತ್ತು ಶಿಕ್ಷಕರ ಮುತುವರ್ಜಿ ಸೇರಿ ಸರ್ಕಾರಿ ಶಾಲೆಯೊಂದರ ಪೂರ್ಣ ಚಿತ್ರಣ ಬದಲಾದ ಕಥೆಯಿದು.
ನಾಲ್ಕು ವರ್ಷದ ಹಿಂದೆ ವಿದ್ಯಾರ್ಥ್ಗಿಳ ಕೊರತೆ, ಸೌಲಭ್ಯಗಳ ಕೊರತೆ, ಶಿಕ್ಷಕರ ಕೊರತೆಯಿಂದ ಬಸವಳಿದಿದ್ದ ಚಿತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಎಲ್ಲ ಕೊರತೆಗಳನ್ನು ನೀಗಿಸಿಕೊಂಡು ಸುಸಜ್ಜಿತವಾಗಿದೆ. ವಿದ್ಯಾರ್ಥಿಗಳ ಸಂರ್ಖಯೆ 70ರಿಂದ 300 ದಾಟಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಬಂದ ಎಲ್ಲ ವಿದ್ಯಾರ್ಥಿಗಳೀಗೆ ಪ್ರವೇಶ ಕೊಡಲು ಸಾಧ್ಯವಾಗಿಲ್ಲ, ಕೊಟ್ಟಿದ್ದರೆ ಮಕ್ಕಳ ಸಂಖ್ಯೆ 500 ದಾಟಿ ಹೋಗುತ್ತಿತ್ತು. ಪ್ರಸ್ತುತ 303 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಎಲ್ಕೆಜಿ, ಯುಕೆಜಿ ಸೇರಿಸಿದರೆ 363.
ಹಲವು ಸಮಸ್ಯೆಯಿದ್ದ ಶಾಲೆ
ಹಿಂದೆ ಶಾಲೆಗೆ ಕೊಠಡಿ ಕೊರತೆಯಿತ್ತು. ಶೌಚಾಲಯದ ಸಮಸ್ಯೆ ಇತ್ತು. ಶಿಕ್ಷಕರ ಸಮಸ್ಯೆ, ಕುಡಿಯುವ ನೀರು ಹೀಗೆ ಸಮಸ್ಯೆಗಳ ಸರಮಾಲೆಯೇ ಉತ್ತು. ಆದರೆ ಮಾರಣಕಟ್ಟೆ ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್ ಶಾಲೆಗೆ ಕೊಡುಗೆಯಾಗಿ ನೀಡಿದ ಕೊಠಡಿಗಳು ಯಾವ ಖಾಸಗಿ ಶಾಲೆ ಕೊಠಡಿಗೂ ಕಡಿಮೆಯಿಲ್ಲದ ಶ್ರೀಮಂತಿಕೆ ಹೊಂದಿವೆ. ಕೊಠಡಿಯಲ್ಲಿ ಎರಡೆರಡು ಫ್ಯಾನ್, ಬೆೆಳಕು, ಎಲ್ಲವೂ ಅಚ್ಚುಕಟ್ಟು.
ದಾನಿಗಳ ನೆರವು
ಕರ್ಣಾಟಕ ಬ್ಯಾಂಕ್ ನೀಡಿದ ವಾಹನ ವ್ಯವಸ್ಥೆ ಹಾಗೂ ಶೌಚಾಲಯ, ಅದರ ಸ್ವಚ್ಛತೆ ವ್ಯವಸ್ಥೆ ಯಾವ ಹೈಫೈ ವಸತಿಗೃಹಕ್ಕೆ ಕಮ್ಮಿಯಿಲ್ಲ. ಸುಸಜ್ಜಿತ ಸಮೂಹ ಭೋಜನ ಶಾಲೆ ವಿದ್ಯಾಲಯದ ಅಂದವನ್ನು ಇನ್ನಷ್ಟು ಹೆಚ್ಚಿಸಿದೆ. ಅಡುಗೆ ಮನೆ ಸಮಸ್ಯೆಯನ್ನು ಎಸ್ಡಿಎಂಸಿ ಅಧ್ಯಕ್ಷ ಡಾ.ರಾಜೇಶ್ ಬಾಯರಿ ನಿವಾರಿಸಿದ್ದು, ಈಗ ಶಾಲೆ ಬಹುತೇಕ ಸೌಲಭ್ಯಗಳನ್ನು ಹೊಂದಿದೆ.
ಹಳೇವಿದ್ಯಾರ್ಥಿ ಸಂಘ ಬೆಂಬಲ
ಮಾರಣಕಟ್ಟೆ ಎಂ.ಎಸ್ ಮಂಜ ಚಾರಿಟೆಬಲ್ ಟ್ರಸ್ಟ್ ಬೆನ್ನಿಗೆ ನಿಂತಿರುವುದು ಶಾಲೆಗೆ ಆನೆಬಲ ತಂದಿದೆ. ಪಾಲಕರೂ ಈ ಸರ್ಕಾರಿ ಶಾಲೆಯತ್ತ ಮುಖ ಮಾಡುತ್ತಿದ್ದು, ಶಾಲೆಯಲ್ಲಿ ಎಲ್ಲ ಸೌಲಭ್ಯ ಸಿಗುತ್ತಿದೆ ಅಂತಾದರೆ ಮಕ್ಕಳ ಕೊರತೆಯಾಗುವುದಿಲ್ಲ ಎನ್ನೋದಕ್ಕೆ ಚಿತ್ತೂರು ಶಾಲೆ ಸಾಕ್ಷಿ. ಇತ್ತೀಚಿನ ದಿನಗಳಲ್ಲಿ ಹಳೇ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಯತ್ತ ಆಸಕ್ತಿ ವಹಿಸುತ್ತಿರುವುದು ಶುಭಲಕ್ಷಣ.
ಪ್ರವೇಶ ಬಯಸಿಬಂದ ಎಲ್ಲರಿಗೂ ದಾಖಲಾತಿ ನೀಡಲಾಗಿಲ್ಲ ಎನ್ನುವ ಕೊರಗಿದ್ದರೂ, ಶಾಲೆ ದಾನಿಗಳ ನೆರವಿಂದ ಸಾಕಷ್ಟು ಉನ್ನತಮಟ್ಟದ ಸಾಧನೆ ಮಾಡಿದೆ. ಶಿಕ್ಷಕರ ಕೊರತೆ ಇಲ್ಲ. ಇಂಗ್ಲಿಷ್, ಕನ್ನಡ ಪ್ರಧಾನ ದ್ವಿಭಾಷೆಯಾಗಿ ಕಲಿಸಲಾಗುತ್ತದೆ. ಇನ್ನಷ್ಟು ಶೌಚಾಲಯ, ಕೊಠಡಿ ಅವಶ್ಯವಿದ್ದು, ಬಿರುಬೇಸಿಗೆಯಲ್ಲಿ ನೀರಿನ ಸಮಸ್ಯೆ ಇದೆ.
-ಬಾಲಕೃಷ್ಣ ಶೆಟ್ಟಿ, ಪ್ರಭಾರ ಮುಖ್ಯಶಿಕ್ಷಕ