ಚಿತ್ರದುರ್ಗ: ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ಅಂಗೀಕೃತ ಮಾಸ್ಟರ್ಲೇ ಔಟ್ ಪ್ರಕಾರ ಅಭಿವೃದ್ಧಿಗೆ ತೆರೆದುಕೊಂಡ ಆಡುಮಲ್ಲೇಶ್ವರ ಮಿನಿ ಮೃಗಾಲಯಕ್ಕೆ ಹುಲಿ ಮತ್ತಿತರ ಪ್ರಾಣಿ, ಪಕ್ಷಿಗಳನ್ನು ತರಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ.
ಮೃಗಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿಷನ್ ಸಿಂಗ್ ಬೋನಾಲ್, ಇಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದ ಬಗ್ಗೆ ತೃಪ್ತಿ ವ್ಯಕ್ತಪಡಿ ಸುವ ಜತೆಗೆ ಹುಲಿ, ಚಿರತೆ ತರಲು ಸಮ್ಮತಿಸಿದ್ದಾರೆ.
ವನ್ಯಜೀವಿ ಕಾಯ್ದೆ 1972 ಷೆಡ್ಯೂಲ್ 1 ಮತ್ತು 2ರ ಪಟ್ಟಿಯಲ್ಲಿ ಹೆಸರಿಸಲಾದ ಪ್ರಾಣಿಗಳ ಆವರಣ ನಿರ್ಮಾಣಕ್ಕೆ ಸಿಝೆಡ್ ಎ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿಯೊಂದಿಗೆ ಹೊಸದಾಗಿ ನಿರ್ಮಿಸಿರುವ (ಎನ್ಕ್ಲೋಸರ್) ಆವರಣಗಳಲ್ಲಿ ಕರಡಿ, ಚಿರತೆಗಳನ್ನು ಇರಿಸಲಾಗಿದೆ.
ಅಂಗೀಕೃತ ಲೇಔಟ್ನಂತೆ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದ್ದು ಪೂರ್ಣಗೊಳ್ಳಲು ಕೋಟ್ಯಂತರ ರೂ. ಅನುದಾನದ ಅಗತ್ಯವಿದೆ. ಈಗಾಗಲೇ ಚಿರತೆ, ಹುಲಿ, ಕರಡಿ, ಕೃಷ್ಣಮೃಗ, ಚುಕ್ಕೆ ಜಿಂಕೆ, ಝೀಬ್ರಾಗೆ ಆವರಣ ನಿರ್ಮಾಣವಾಗಿವೆ. ವಿವಿಧ ಪ್ರಾಣಿಗಳಿಗೆ ಇನ್ನೂ 20 ಆವರಣಗಳಗಳನ್ನು ನಿರ್ಮಿಸಬೇಕಿದೆ. ಹೊಸ ಆವರಣಗಳಿಗೆ ಚಿರತೆ, ಕರಡಿ, ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ. ಹೊಸ ಎಂಟ್ರಿ ಪ್ಲಾಜಾ, ವಿಸಿಟರ್ಸ್ ಹಾಗೂ ಸರ್ವಿಸ್ ಪಾಥ್ ಕೂಡ ಸಿದ್ಧವಾಗಿವೆ.
ಹುಲಿಗಳಿಗೆ ಸಮ್ಮತಿ: ಜೋಗಿಮಟ್ಟಿಯ ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಹುಲಿಗಳನ್ನು ತರಲು ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಸೂಚಿಸಿದೆ. ಮೈಸೂರು ಮೃಗಾಲಯ, ಬೆಂಗಳೂರಿನ ಬನ್ನೇರು ಘಟ್ಟದಿಂದ ತಲಾ ಎರಡು ಹುಲಿಗಳು ಹಾಗೂ ಶಿವಮೊಗ್ಗದಿಂದ 5 ಚಿರತೆ, 2 ಕರಡಿಗಳನ್ನು ತರುವ ಸಾಧ್ಯತೆ ಇದೆ.