ಚಿತ್ರದುರ್ಗ: ಚಿತ್ರದುರ್ಗದಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ ಮೈಸೂರು, ಮುಂಬಯಿ, ತಮಿಳುನಾಡು ಮೂಲದ 16 ಜನರಿಗೆ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಆಪಾದಿಸಿ ಅಲ್ಲಿನ ಯುವಕನೊಬ್ಬ ಚಿತ್ರೀಕರಿಸಿದ್ದ ವಿಡಿಯೋ ವೈರಲ್ ಆಗಿದೆ.
ಕ್ವಾರಂಟೈನ್ ಮಾಡಲಾದ ಸ್ಥಳೀಯ ಕಲಾ ಕಾಲೇಜು ಬಳಿ ಕಟ್ಟಡದಲ್ಲಿನ ವ್ಯವಸ್ಥೆಯ ಚಿತ್ರಣ ವನ್ನು ಯುವಕ ಸೆರೆ ಹಿಡಿದು ಮಾಧ್ಯಮಗಳಿಗೆ ಭಾನುವಾರ ಬಿಡುಗಡೆ ಮಾಡಿದ್ದಾನೆ.
ಈ ವಿಷಯ ಇದು ದಿಗ್ವಿಜಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲೂ ಹರಿದಾಡಿ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಕ್ವಾರಂಟೈನ್ ಮಾಡಲಾದ ಕಟ್ಟಡದಲ್ಲಿ ಸ್ನಾನ, ಶೌಚಕ್ಕೆ ವ್ಯವಸ್ಥೆ ಇಲ್ಲ. ಒಂದೇ ಪಾತ್ರೆಯಲ್ಲಿನ ನೀರನ್ನೇ ಎಲ್ಲರೂ ಕುಡಿಯಬೇಕಿದೆ. ಬೆಡ್ಶೀಟ್ ಕೊಟ್ಟಿಲ್ಲ, ಊಟವೂ ಸರಿ ಇಲ್ಲ. ಸೊಳ್ಳೆಗಳ ಕಾಟ ಅಧಿಕವಾಗಿದೆ ಎಂದು ಯುವಕ ಆಪಾದಿಸಿದ್ದಾನೆ.
ಮೈಸೂರು-11, ತಮಿಳುನಾಡು-3 ಹಾಗೂ ಮುಂಬಯಿನ ಒಬ್ಬರು ಇಲ್ಲಿದ್ದು ನಮಗೆ ಕರೊನಾ ಇಲ್ಲ. ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಈಗ ಸೋಂಕು ತಗುಲಿದರೆ ಜಿಲ್ಲಾಡಳಿತವೇ ಹೊಣೆ ಎಂದು ಎಚ್ಚರಿಸಿದ್ದಾನೆ. ತಮ್ಮನ್ನು ಮೂಲ ಸೌಕರ್ಯವಿರುವ ಕಡೆ ಸ್ಥಳಾಂತರಿಸಿ ಎಂದು ಮನವಿ ಮಾಡಿದ್ದಾನೆ.
ನಿರ್ಧಿಷ್ಟ ಊಟ ಕೊಡಲಾಗದೆಂದ ಡಿಸಿ: ಕ್ವಾರಂಟೈನ್ನಲ್ಲಿರುವವರು ನಿರ್ಧಿಷ್ಟ ಬೇಡಿಕೆ ಇಟ್ಟರೆ ಅವೆಲ್ಲವನ್ನೂ ಕೊಡಲಾಗದು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸ್ಪಷ್ಟಪಡಿಸಿದ್ದಾರೆ. ಬೆಡ್ಶೀಟ್ ಕೊಟ್ಟಿರಲಿಲ್ಲ ಆದರೆ ಉಳಿದಂತೆ ಎಲ್ಲ ಸೌಕರ್ಯಗಳಿವೆ. ಕೆಲ ಅಧಿಕಾರಿಗಳು ಹೋಂ ಕ್ವಾರಂಟೈನ್ನಲ್ಲಿದ್ದ ಕಾರಣ ಸ್ವಲ್ಪ ವ್ಯತ್ಯಾಸ ಆಗಿದೆ. ಅದನ್ನು ಸರಿಪಡಿಸಲಾಗಿದೆ. ಗುಣ ಮಟ್ಟದ ಆಹಾರ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಬಿರಿಯಾನಿ ಕೊಡಲಾಗದೆಂದ ಸಂಸದರು: ಕ್ವಾರಂಟೈನ್ನಲ್ಲಿ ಇರುವವರು ಬಿರಿಯಾನಿ ಕೇಳುತ್ತಿದ್ದರು ಅದನ್ನೆಲ್ಲ ಪೂರೈಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸಂಸದ ಎ.ನಾರಾಯಣ ಸ್ವಾಮಿ ಅವರಿಗೆ ಮಾಹಿತಿ ನೀಡಿದ್ದಾರೆ.
ಕ್ವಾರಂಟೈನ್ ಸ್ಥಳದ ವಿಡಿಯೋ ಕುರಿತಾದ ವರದಿ ದಿಗ್ವಿಜಯ ಟಿವಿಯಲ್ಲಿ ಪ್ರಸಾರವಾಗಿದ್ದನ್ನು ಗಮನಿಸಿ ಜಿಲ್ಲಾಧಿಕಾರಿ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ಮೂಲ ಸೌಕರ್ಯಕ್ಕೆ ತೊಂದರೆ ಏನಿಲ್ಲ. ಊಟಕ್ಕೆ ಬಿರಿಯಾನಿ ಕೇಳುತ್ತಿದ್ದಾರೆ ಎಂದು ಮಾಹಿತಿ ನೀಡಿದರೆಂದು ಸಂಸದರು ತಿಳಿಸಿದ್ದಾರೆ.
ಹಾಗೆಲ್ಲ ಬಿರಿಯಾನಿ ಕೊಡಲು ಆಗುವುದಿಲ್ಲ. ಆದರೆ ಮೂಲ ಸೌಕರ್ಯ ಚೆನ್ನಾಗಿರುವಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾಗಿ ಸಂಸದರು ಹೇಳಿದ್ದಾರೆ.