ಚಿತ್ರದುರ್ಗ: ಚುನಾವಣೆ ಆಯೋಗ ವೋಟರ್ ಐಡಿ ಕೊಟ್ಟಿರುವುದು, ನಮ್ಮ ಗುರುತು ಖಾತ್ರಿಗಷ್ಟೇ ಸೀಮಿತವಲ್ಲ. ಸಜ್ಜನರ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ವೈ.ವಟವಟಿ ಹೇಳಿದರು.
ಜಿಲ್ಲಾಡಳಿತದಿಂದ ತರಾಸು ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮತದಾನದಿಂದ ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡುವ ಮೂಲಕ ಸಂವಿಧಾನದ ಆಶಯ ಈಡೇರಿಸಬಹುದು. ಜಾತಿ, ಧರ್ಮ, ಸಿರಿವಂತಿಕೆ ಪರಿಗಣಿಸದೆ, ಯೋಗ್ಯರನ್ನು ಚುನಾಯಿಸುವ ಗಣತಂತ್ರವನ್ನು ಬಲಪಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್.ವಿನೋತ್ಪ್ರಿಯಾ ಮಾತನಾಡಿ, ಜನರು ಮತದಾನ ಬಹಿಷ್ಕಾರಕ್ಕೆ ಮುಂದಾಗದೆ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು.
ಎಸ್ಪಿ ಡಾ.ಕೆ.ಅರುಣ್ ಮಾತನಾಡಿ, ಮತದಾನ ದೇಶ ನಮಗೆ ನೀಡಿರುವ ಬಹು ಮುಖ್ಯ ಅಸ್ತ್ರ. ನಮ್ಮ ಹಕ್ಕನ್ನು ಚಲಾಯಿಸದಿದ್ದರೆ ನಮಗೆ ನಷ್ಟವಾಗುವುದು ಎಂದು ಹೇಳಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಪಂ ಸಿಇಒ ಸಿ.ಸತ್ಯಭಾಮಾ, ಎಡಿಸಿ ಸಿ.ಸಂಗಪ್ಪ, ಎಸಿ ವಿ.ಪ್ರಸನ್ನಕುಮಾರ್, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಮತ್ತಿತರ ಅಧಿಕಾರಿಗಳಿದ್ದರು.
ಬಣ್ಣದ ವೋಟರ್ ಐಡಿ ವಿತರಣೆ: ಮತಪಟ್ಟಿ ಪರಿಶೀಲನೆ ಹಾಗೂ ಪರಿಷ್ಕರಣೆ ಕಾರ್ಯದಲ್ಲಿ ಉತ್ತಮ ಸಾಧನೆ ತೋರಿದ ಮತಗಟ್ಟೆ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ, ರಸಪ್ರಶ್ನೆ ಹಾಗೂ ನಾಟಕ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಯುವ ಮತದಾರರಿಗೆ ಬಣ್ಣದ ಭಾವಚಿತ್ರವಿರುವ ವೋಟರ್ ಐಡಿ ವಿತರಿಸಲಾಯಿತು.