ಚಿತ್ರದುರ್ಗ: ತಾಲೂಕಿನ ಎಲ್ಲ 38 ಗ್ರಾಪಂ ಕಚೇರಿಗಳಿಗೂ ಶೀಘ್ರದಲ್ಲೇ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸುವುದಾಗಿ ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಹೇಳಿದರು.
ಬುಧವಾರ ತಾಪಂ ಸಾಮಾನ್ಯ ಸಭೆಯಲ್ಲಿ ವೇಣುಗೋಪಾಲ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಹಿರೇಗುಂಟನೂರು ಗ್ರಾಪಂನಲ್ಲಿ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇಒ ಜತೆ ಜೂ.22ರಂದು ಅಲ್ಲಿಗೆ ಭೇಟಿ ನೀಡಿ ತನಿಖೆ ನಡೆಸಲಾಗುವುದು ಎಂದರು.
ಎಲ್ಲ ಸದಸ್ಯರ ಕ್ಷೇತ್ರಗಳಿಗೂ ಅನುದಾನ ಸಮಾನ ಹಂಚಿಕೆ ಮಾಡಲಾಗುತ್ತಿದೆ, ಎಲ್ಲೂ ತಾರತಮ್ಯ ಮಾಡುವುದಿಲ್ಲ. ತಾಪಂ ಆಸ್ತಿ ದಾಖಲೆಗಳನ್ನು ಪತ್ತೆಯಾಗಿವೆ ಎಂದು ತಿಳಿಸಿದರು.
ಹಿರೇಗುಂಟನೂರು ಪಂಚಾಯಿತಿಯಲ್ಲಿ ಸಾಕಷ್ಟು ಹಗರಣಗಳಾಗಿವೆ. 4 ವರ್ಷಗಳಿಂದ ತನಿಖೆಗೆ ಒತ್ತಾಯಿಸುತ್ತಿರುವುದಾಗಿ ಎಂದು ಸುರೇಶ್ ಹೇಳಿದರು.
ಅವ್ಯವಹಾರಗಳಿಂದಾಗಿ ಈ ಪಂಚಾಯಿತಿಗೆ ಪಿಡಿಒಗಳು ಬರಲು ಇಷ್ಟಪಡುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಎಲ್ಲದ್ದಕ್ಕೂ ಕಮಿಷನ್ ಕೇಳುತ್ತಾರೆಂದು ಸದಸ್ಯ ಪರಮೇಶ್ವರಪ್ಪ ದೂರಿದರು.
ಕರಿಯಣ್ಣ ಮತ್ತಿತರ ಸದಸ್ಯರು ಚರ್ಚೆಯಲ್ಲಿದ್ದರು. ಉಪಾಧ್ಯಕ್ಷೆ ಶಾಂತಮ್ಮ ರೇವಣಸಿದ್ದಪ್ಪ, ಜೀವ ವೈವಿಧ್ಯ ಸಮಿತಿ ಅಧ್ಯಕ್ಷ ಸುರೇಶ್ ನಾಯ್ಕ, ಇಒ ಎಚ್.ಕೃಷ್ಣಾನಾಯ್ಕ ಇದ್ದರು.