ಚಿತ್ರದುರ್ಗ: ಹಿಂದಿನ ಪ್ರಧಾನಿ ಲಾಲ್ಬಹದ್ದೂರ್ ಶಾಸ್ತ್ರಿ ಜೈ ಜವಾನ್, ಜೈಕಿಸಾನ್ ಎನ್ನುವ ಮೂಲಕ ದೇಶ ಕಾಯುವ ಯೋಧ ಹಾಗೂ ಅನ್ನಕೊಡುವ ರೈತನ ಸೇವೆಯನ್ನು ಶ್ಲಾಘಿಸಿದ್ದರು. ಇಂದು ರಾಜ್ಯ ಸರ್ಕಾರ ರೈತರ ಸೇವೆಯನ್ನು ಜನರಿಗೆ ನೆನಪಿಸಲು ದೂರವಾಣಿ ಕರೆ ಸ್ವೀಕರಿಸುತ್ತಿದ್ದಂತೆ ಹಲೊ ಎನ್ನುವ ಬದಲು ಜೈ ಕಿಸಾನ್ ಎಂದು ಹೇಳುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದೆ.
ಆ ಮೂಲಕ ಸಾಮಾಜಿಕ ಅಂದೋಲನದ ರೂಪದಲ್ಲಿ ಅನ್ನದಾತನ ತಾಕತ್ತನ್ನು ಮನವರಿಕೆ ಮಾಡಿಕೊಡಲು ಕೃಷಿ ಇಲಾಖೆ ಮುಂದಡಿ ಇಟ್ಟಿದೆ.
ಕೃಷಿ ವಿದ್ಯಾರ್ಥಿಗಳು, ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳು ಅನ್ನದಾತನ ಮಹತ್ವ ಸಾರಲು ಹಲೋ ಬದಲು ಜೈಕಿಸಾನ್ ಎಂದು ಹಾಗೂ ಮೊಬೈಲ್ ಕಾಲರ್ ಟ್ಯೂನ್ ಆಗಿ ನೇಗಿಲ ಹಿಡಿದ ಹೊಲದೊಳು ಉಳುವ ಯೋಗಿಯ ನೋಡಲ್ಲಿ ಹಾಡಿನ ಪಲ್ಲವಿಯನ್ನು ಕಾಲರ್ ಟ್ಯೂನ್ ಆಗಿ ಬಳಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಜೂ.15ರಂದು ಸೂಚಿಸಿದ್ದರು.
ಈಗ ಇಲಾಖೆ ಕೃಷಿ ನಿರ್ದೇಶಕರು ದೂರವಾಣಿ ಕರೆ ಸ್ವೀಕರಿಸುವಾಗ ಜೈ ಕಿಸಾನ್ ಹೇಳುವಂತೆ ಆದೇಶಿಸಿದ್ದಾರೆ. ಆದೇಶ ಕೈ ಸೇರಿದೆ.ಮೊದ,ಮೊದಲು ನಾವೆಲ್ಲರೂ ಪ್ರಜ್ಞಾ ಪೂರ್ವಕವಾಗಿ ಹೇಳುವುದನ್ನು ರೂಢಿಸಿಕೊಂಡರೆ ಕ್ರಮೇಣ ರೂಢಿಯಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಸದಾಶಿವ ತಿಳಿಸಿದರು